Monday, October 9, 2017

ಹರಿಗೆ ಕೊಡು ಗಾಂಡಿವವ....


ಭಾಗ ೧
   ಮನುಷ್ಯನ ವರ್ತನೆಗಳು ಹೊರಗಿನ ಘಟನೆಗಳಿಂದ ಕೆಲವೊಮ್ಮೆ, ಬೇರೆಯವರ ಮಾತುಗಳಿಂದ ಕೆಲವೊಮ್ಮೆ, ನಮ್ಮದೇ ಆದ ಊಹೆಗಳಿಂದ ಕೆಲವೊಮ್ಮೆ ಪ್ರಚೋದಿತವಾಗುತ್ತವೆ. ಒಂದು ಘಟನೆ ಅಥವಾ ಮಾತು ಅಥವಾ ಊಹೆಗಳಿಗೂ ಮತ್ತು ವ್ಯಕ್ತಿಯ ಪ್ರತಿಕ್ರಿಯೆಗಳಿಗೂ ಇರುವ ಸಂಬಂಧದ ರೂಪ ಯಾವ ರೀತಿಯದು? ಘಟನೆಯ ಮಹತ್ವ ಅಥವ ತೀವ್ರತೆ, ಅದು ಸಂಬಂಧಿಸಿದ ವ್ಯಕ್ತಿಯ ಮೇಲೆ ಮಾಡುವ ಪರಿಣಾಮದ ಆಧಾರದಲ್ಲಿಯೇ ವ್ಯಕ್ತವಾಗುತ್ತದೆ. ಪರಿಣಾಮವನ್ನುಂಟುಮಾಡದ, ಪ್ರತಿಕ್ರಿಯೆಯನ್ನು ಹುಟ್ಟಿಸದ ಘಟನೆ ಗಮನೀಯವಾಗುವುದಿಲ್ಲ. ಅಂದರೆ ವ್ಯಕ್ತಿಯ ವರ್ತನೆಯ ತೀವ್ರತೆಯ ಆಧಾರದಲ್ಲಿಯೇ ನಾವು ಆ ಘಟನೆಯನ್ನು ವ್ಯಾಖ್ಯಾನಿಸಬಹುದೇ ಹೊರತು, ಆ ತೀವ್ರತೆಯನ್ನು ಬದಿಗಿಟ್ಟು ವ್ಯಾಖ್ಯಾನಿಸಲು ಆಗುವುದಿಲ್ಲ. ಈ ವರ್ತನೆಯನ್ನು,ಹೊರ ಘಟನೆಯನ್ನು ವರ್ಣಿಸುವಷ್ಟು ಸುಲಭದಲ್ಲಿ ವರ್ಣಿಸಲು ಆಗುವುದಿಲ್ಲ. ವ್ಯಕ್ತಿ ಯಾಕೆ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತಾನೆ ಎಂಬುದಕ್ಕೆ ಕಾರಣಗಳನ್ನು ಹುಡುಕುವುದು ಸುಲಭವಲ್ಲ. ಒಂದೇ ರೀತಿಯ ಪರಿಣಾಮ ಬೀರಬಹುದಾದ ಎರಡು ಘಟನೆಗಳಲ್ಲಿ ಪ್ರತಿಕ್ರಿಯೆ ಒಂದೇ ರೀತಿಯದಾಗಿರದೆ ಭಿನ್ನವಾಗಿರಲು, ಘಟನೆಯನ್ನು ಅರ್ಥೈಸುವ ವ್ಯಕ್ತಿಯ ಗ್ರಹಿಕೆಯ ಸಂಕೀರ್ಣ ಸ್ವರೂಪವೇ ಕಾರಣ. ಈ ರೀತಿಯ ಸಂಕೀರ್ಣ ವರ್ತನೆಯನ್ನು ವ್ಯಾಸ ಮತ್ತು ಕುಮಾರವ್ಯಾಸ ಚಿತ್ರಿಸಿದ ಒಂದು ಸನ್ನಿವೇಶದ ಆಧಾರದಲ್ಲಿವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿದೆ.
   ಕುರುಕ್ಷೇತ್ರ ಯುದ್ಧದ ಹದಿನೇಳನೆಯ ದಿವಸ. ಕರ್ಣನ ಸೇನಾಪತ್ಯ. ಆ ದಿನ ಧರ್ಮರಾಯ ಮತ್ತು ಕರ್ಣನಿಗೆ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ಅಂತಿಮವಾಗಿ ಧರ್ಮರಾಯ ಗಾಯಗೊಂಡು, ಪರಾಜಿತನಾಗುತ್ತಾನೆ. ಕರ್ಣ ಅವನನ್ನು ಹೀಯಾಳಿಸಿ,ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಬಿಟ್ಟುಬಿಡುತ್ತಾನೆ. ಕರ್ಣನ ಬಾಣಗಳ ಪೆಟ್ಟಿಂದ ಜರ್ಜರಿತನಾದ ಧರ್ಮರಾಯ ತನ್ನ ಬಿಡಾರಕ್ಕೆ ಮರಳುತ್ತಾನೆ.
   ಧರ್ಮರಾಯನ ರಥ ಯುದ್ಧಮಧ್ಯದಲ್ಲಿ  ಬಿಡಾರದತ್ತ ತೆರಳುತ್ತಿರುವುದನ್ನು ಕಂಡ ಅರ್ಜುನನಿಗೆ ಧರ್ಮರಾಯನಿಗೆ ಏನೋ ಅಗಿದೆ ಎಂಬ ಅನುಮಾನ ಬರುತ್ತದೆ. ಚಿಕಿತ್ಸೆಗಾಗಿ ಬಿಡಾರಕ್ಕೆ ಮರಳಿದ ಧರ್ಮರಾಯನನ್ನು ನೋಡಿ ಸಂತೈಸಲು ಕೃಷ್ಣಾರ್ಜುನರು ರಣರಂಗದಿಂದ ಹೊರಡುತ್ತಾರೆ.
   ಆಗಿನ ಅವನ ಸ್ಥಿತಿ ಮತ್ತು ಭಾವನೆಯ ಚಿತ್ರಣ ಹೀಗಿದೆ,
] …ಕಂಬನಿಗಳಾಲಿಯೊಳೀಡಿರಿದು ಸೋರಿದವು ಸೊಂಪಡಗಿತು ಮುಖಾಂಬುಜದ..(ಸಂ-೧೪,-೧೦)
] “ಸೇನೆ ಮುರಿಯಲಿ ಕೌರವನ ದುಮ್ಮಾನ ಹರಿಯಲಿ ನನಗೆ ಚಿತ್ತಗ್ಲಾನಿಯೆಳ್ಳೆನಿತಿಲ್ಲ ಕಟ್ಟಲಿ ಗುಡಿಯ ಗಜನಗರ ಆ ನರೇಂದ್ರನ ಸಿರಿಮೊಗಕೆ ದುಮ್ಮಾನವೋ ಮೇಣ್ ಸುರಪುರಕೆ ಸಂಧಾನವೋ ನಾನರಿಯನಳ್ಳೆದೆಯಾದುದೆನಗೆಂದ || (ಸಂ-೧೪,ಪ-೧೧)
“ಧರಣಿಪತಿ ಸಪ್ರಾಣನೇ ಗಜಪುರದ ರಾಜ್ಯಕೆ ನಿಲಿಸುವೆನು ಮೇಣ್ ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ ಅರೆಗಳಿಗೆ ಧರ್ಮಜನ ಬಿಟ್ಟಾನಿರೆನು........” (ಪ-೧೨)
   ಮೊದಲ ಚಿತ್ರಣ ಅವನ ದೈಹಿಕ ಸ್ಥಿತಿ.ಎರಡನೆಯದು ಅವನ ವೈಚಾರಿಕ ಪ್ರತಿಕ್ರಿಯೆಗಳು. ಅರ್ಜುನನಿಗೆ ಧರ್ಮರಾಯನ ಬಗ್ಗೆ ಇರುವ ಪ್ರೀತಿ,ಗೌರವದ ತೀವ್ರತೆಯನ್ನು ಸೂಚಿಸುತ್ತವೆ. ಮತ್ತು ಅರ್ಜುನನ ಈ ಪ್ರತಿಕ್ರಿಯೆಗಳ ಕಾರಣ ಅವನ ಊಹೆ. ಘಟನೆ ನಡೆದದ್ದು ಹೌದಾದರೂ, ಆ ಘಟನೆಯ ಅರಿವು ಅರ್ಜುನನಿಗೆ ಇಲ್ಲ, ಆದರೆ ಊಹೆ ಮಾಡುತ್ತಿದ್ದಾನೆ. ಅವನ ಊಹೆಯೇ ಅವನ ಪ್ರತಿಕ್ರಿಯೆಗೆ ಕಾರಣವಾಗಿದೆ. ಈ ಊಹೆ ಅವನಲ್ಲಿ ಹುಟ್ಟಿಸುವ ಪ್ರತಿಕ್ರಿಯೆ ನೇರವಾಗಿ ಅವನ ಮತ್ತು ಧರ್ಮರಾಯನ ಸಂಬಂಧದ ಮೇಲೆ ನಿರ್ಧರಿತವಾಗಿದೆ. ಸಂಬಂಧ ಕೇವಲ ಅಣ್ಣ-ತಮ್ಮ ಎಂಬ ಸಂಬಂಧವಲ್ಲ, ಅವನಿಗೆ ಧರ್ಮರಾಯನ ಬಗ್ಗೆ ಇರುವ ಬಂಧ.
***
ಬಿಡಾರದಲ್ಲಿರುವ ಧರ್ಮರಾಯನನ್ನು ಕಂಡಾಗ ಅರ್ಜುನನ ಸ್ಥಿತಿ:
೧] ಕರಗಿತಂತಃಕರಣವಾಲಿಗಳೊರತೆಯನೆ ಕಣ್ಣಾಲಿಯಲಿ ಕಾತರಿಸಿದವು ಜಲಬಿಂದುಗಳು .....(ಸಂ-೧೬,ಪ-೮)
   ಅನುಮಾನಿಸಿದಾಗ ’ಈರಿಡಿದು ಸೋರಿದ’ ಕಂಬನಿಗಳ ಜೊತೆಗೆ ಈಗ ಅಂತಃಕರಣವೂ ಕರಗಿದೆ. ಆದರೆ ಈಗ ಅವನ ಪ್ರತಿಕ್ರಿಯೆ ಇದಕ್ಕೂ ಮಿಕ್ಕಿ ಹೋಗುತ್ತಿಲ್ಲ. ಊಹಿಸಿದ ಸಂದರ್ಭದಲ್ಲಿ ಊಹೆಗೆ ಮಿತಿ ಇರದಿದ್ದ ಕಾರಣ ಆತ ಆ ಮಾತುಗಳನ್ನು ಆಡಿದ್ದ. ಅವು, ಈಗಾಗಲೆ ಗಮನಿಸಿದಂತೆ ಸ್ಥಿತಿಯಿಂದ ಪ್ರೇರಿತವಾಗಿರದೆ, ಊಹೆಯಿಂದ ಪ್ರೇರಿತವಾಗಿದ್ದವು. ಇಲ್ಲಿ ಸ್ಥಿತಿ ಅವನ ಎದುರಿದೆ. ಧರ್ಮರಾಯ ಮರಣಿಸಿಲ್ಲ, ಘಾಯಗೊಂಡಿದ್ದಾನೆ, ಚಿಕಿತ್ಸೆ ನಡೆಯುತ್ತಿದೆ. ಆದ್ದರಿಂದ ಉಳಿದ ಯಾವ ರೀತಿಯ ಪ್ರತಿಕ್ರಿಯೆಗಳಿಗೂ ಇಲ್ಲಿ ಪ್ರಚೋದನೆ ಇಲ್ಲ. ಅರ್ಜುನ “ಚೇಷ್ಟಾಪರಿಗತಿಯನಾರೈವುತಭಿಮುಖನಾಗಿ ಕುಳ್ಳಿರ್ದ”(ಪ-೮).
***
“ಹರಿಕರಾಬ್ಜಸ್ಪರ್ಷ ಮಾತ್ರ ಸ್ಫುರಣದಿಂದಾಪ್ಯಾಯಿತಾಂತಃಕರಣನಾದ”(ಪ-೧೦)ಧರ್ಮರಾಯನಿಗೆ ಎಚ್ಚರವಾಗುತ್ತದೆ. ಎದುರು ಕುಳಿತ ಅರ್ಜುನನನ್ನು ಕಂಡ ಅವನ ಪ್ರತಿಕ್ರಿಯೆ ಏನು?
೧] ಹದುಳವೇ ಪಾರ್ಥಂಗೆ?(ಪ-೧೧)
ಪಾರ್ಥ ಕ್ಷೇಮವೇ ಎಂಬ ಅವನ ಪ್ರಶ್ನೆಯಲ್ಲಿ ಕಾಳಜಿಯಿಲ್ಲ, ವ್ಯಂಗ್ಯವಿದೆ.ಇದು ಮುಂದಿನ ಅವನ ಮಾತುಗಳಿಂದ ಸ್ಪಷ್ಟವಾಗುತ್ತದೆ.
೨] “ಕರ್ಣಂಗೆ ಮಾಡಿದುಪಾಯವಾವುದು” (ಪ-೧೨)
೩]“ಬೇರೆ ಸಮಸಪ್ತಕರೊಳೆಕ್ಕಟಿ ತೋರಿದೆ ತೋರಿಸಿದೆ ನೀ ತೊಂಡಿನೋಲೆಯಕಾರತನವನು”[ಪ-೧೩]
೪]“ಸೂತತನಯನ ಗೆಲಿದು ಬಂದೆಯೋ ದಿವಿಜನಗರಿಗೆ ಕಳುಹಿ ಬಂದೆಯೋ ಕಂಡು ಕೆಣಕದೆ ಬಂದೆಯೋ” [ಪ-೧೪]
೫] ...ಉಳುಹಿಬಿಡುವನೇ ಸಮರ ಮುಖದಲಿ ಮಲೆತನಾದರೆ ಕರ್ಣನು....(ಪ-೧೪)
   ಧರ್ಮರಾಯನ ಈ ಮಾತುಗಳ ಕಾರಣ ಏನು? ತಾನು ಯುದ್ಧದಲ್ಲಿ ಸೋತದ್ದು ಮತ್ತು ಆ ಸೋಲನ್ನು ಅವಮಾನ ಎಂದು ಭಾವಿಸಿದ್ದು. ಅರ್ಜುನನನ್ನು ತನ್ನ ಸೋಲಿಗೆ ಜವಾಬ್ದಾರನನ್ನಾಗಿ ಮಾಡುವ ಅಗತ್ಯವೇ ಇಲ್ಲ. ಆದರೆ ಧರ್ಮರಾಯ ತನ್ನ ಸೋಲಿನ ಕಾರಣವನ್ನು ಅರ್ಜುನನ ನಿಷ್ಕ್ರಿಯತೆ ಎಂಬಂತೆ ಭಾವಿಸಿದ್ದಾನೆ. ತನ್ನನ್ನು ಕಾಪಾಡಲು ಆತ ಬರಲಿಲ್ಲ ಎಂಬುದು ಧರ್ಮರಾಯನಲ್ಲಿ, ಅರ್ಜುನನ ಬಗ್ಗೆ ಸಿಟ್ಟು ಉಕ್ಕುವಂತೆ ಮಾಡಿದೆ. (ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ ಬಂದು...ಸಂ-೧೬,ಪ-೨೬). ನಿರೀಕ್ಷೆಯ ಈ ವೈಫಲ್ಯ ಅವನ ಎಲ್ಲ ವರ್ತನೆಗಳನ್ನು ಪ್ರಚೋದಿಸುತ್ತಿದೆ. ಧರ್ಮರಾಯ ಕರ್ಣನ ವೀರತ್ವವನ್ನು ಅರ್ಜುನನ ವೀರತ್ವದೊಡನೆ ಹೋಲಿಸುತ್ತಾ ಅರ್ಜುನನನ್ನು ಹೀಯಾಳಿಸುತ್ತಿದ್ದಾನೆ. ಎಲ್ಲೂ ತನ್ನ ದೌರ್ಬಲ್ಯವನ್ನು ಹೇಳಿಕೊಳ್ಳುತ್ತಿಲ್ಲ. ಯುದ್ಧದಲ್ಲಿ ಸೋಲು ಮತ್ತು ಗೆಲವು ಸಹಜ ಎಂಬ ಅರಿವು ಧರ್ಮರಾಯನಿಗೆ ಇದ್ದಿದ್ದರೆ ಈ ಮಾತುಗಳು ಬರುತ್ತಲೇ ಇರಲಿಲ್ಲ.ತನ್ನ ಸೋಲನ್ನು ಅವನು ಗ್ರಹಿಸಿದ ರೀತಿ ಅವನ ವರ್ತನೆಗಳನ್ನು ಪ್ರಚೋದಿಸುತ್ತಿದೆ.
   ಅರ್ಜುನ ಧರ್ಮರಾಯನ ಈ ಹೀಯಾಳಿಕೆಗಳಿಗೆ ವ್ಯಗ್ರನಾಗುವುದಿಲ್ಲ. ಧರ್ಮರಾಯನ ಎಲ್ಲ ಮಾತುಗಳು ಆತನಿಗೆ ಹಳಹಳಿಕೆಗಳಂತೆ ಅನಿಸುತ್ತವೆ. ಅವನಿಗೆ ಕರ್ಣನನ್ನು ಎದುರಿಸಿ ಗೆಲ್ಲುವ ಆತ್ಮ ವಿಶ್ವಾಸವಿದೆ. ಹಾಗಾಗಿ ಅವನು ತಾನು ಕರ್ಣನನ್ನು ಕೊಲ್ಲುತ್ತೇನೆ, ಚಿಂತೆ ಬಿಡು ಎಂದು ಹೇಳುತ್ತಾನೆ. ಈ ಮಾತನ್ನು ಆಡಲು ಪ್ರಚೋದನೆ ತನ್ನ ಬಗ್ಗೆ ಇರುವ ಆತ್ಮವಿಶ್ವಾಸ ಮತ್ತು ಧರ್ಮರಾಯನನ್ನು ಸಂತೈಸಲು ಬಯಸಿದ ಅವನ ಬಯಕೆ.
 ಪ್ರತಿಕ್ರಿಯೆಗಳು ಸರಪಳಿಯ ಕೊಂಡಿಯಂತಿರುತ್ತವೆ. ಘಟನೆಗಳು ಘಟನೆಗಳಿಗೆ, ಮಾತು ಮಾತಿಗೆ ಕಾರಣವಾಗುತ್ತಾ ಹೋಗುತ್ತದೆ. ಆದರೆ ಕೆಲವೊಮ್ಮೆ ಈ ಕೊಂಡಿ ತಪ್ಪಿದಾಗ ವರ್ತನೆಗಳು ಅನಿರೀಕ್ಷಿತವಾದ ದಿಕ್ಕಗೆ ಪಲ್ಲಟಿಸುತ್ತವೆ. ಅರ್ಜುನ ನೀಡಿದ ಭರವಸೆ ಧರ್ಮರಾಯನಿಗೆ ಸಮಾಧಾನ ತರಬೇಕಿತ್ತು. ಆದರೆ ಆತ ಈ ಕೊಂಡಿಯನ್ನು ಗ್ರಹಿಸಲು, ಒಪ್ಪಲು ಸಿದ್ಧನಿಲ್ಲ. ಆತನ ವರ್ತನೆ ಈ ಹೊಸ ಕಾರಣದಿಂದ (ಅರ್ಜುನನ ಭರವಸೆ) ಪ್ರಚೋದಿತವಾಗುವ ಬದಲು, ಹಳೆಯ ಕಾರಣಗಳಲ್ಲಿಯೇ ಉಳಿದುಬಿಟ್ಟಿದೆ.ಹಾಗಾಗಿ ಆತ ಅರ್ಜುನನ ಮಾತುಗಳನ್ನು ನಂಬದೆ, ಆಡುವ ಮಾತುಗಳು ಇನ್ನೂ ಹರಿತವಾಗುತ್ತವೆ.
“ನಾಲಗೆಯ ನೆಣಗೊಬ್ಬು ಮಿಕ್ಕು ಛಡಾಳಿಸಿದರೇನಹುದು ಕರ್ಣನ ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ..”[ಸಂ-೧೬,ಪ-೧೭]
“ನಿನಗೆ ಮಣಿವವನಲ್ಲ ರಾಧಾತನಯ”[ಪ-೧೮]
“ಕರ್ಣಜಯವತಿ ಸುಲಭವೇ ನಿನ್ನಂದದವರಿಗೆ..”[ಪ-೧೯]
“ಜಾಣತನದಲಿ ಕಾದಿ ಹಿಂಗುವ ದ್ರೋಣನಲ್ಲಳವಿಯಲಿ ಕಳವಿನ ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ..[ಪ-೨೦]
“ನಿನ್ನ ಗಂಟಲ ಗಾಳ”[ಪ-೨೧]
   ಈ ಎಲ್ಲ ಮಾತುಗಳ ಮೂಲಕ ಅರ್ಜುನನ ಶೌರ್ಯ ಮತ್ತು ಪ್ರಾಮಾಣಿಕತೆಯನ್ನು ಧರ್ಮರಾಯ ಶಂಕಿಸುತ್ತಿದ್ದಾನೆ.ಧರ್ಮರಾಯನ ಈ ಎಲ್ಲ ಹೀಯಾಳಿಕೆಯ ಮಾತುಗಳನ್ನು ಅರ್ಜುನ ಸಮಾಧಾನದಿಂದಲೇ ಸ್ವೀಕರಿಸುತ್ತಾನೆ. ಧರ್ಮರಾಯನನ್ನು ರಕ್ಷಿಸುವ ಉದ್ದೇಶದಿಂದ ಬರುತ್ತಿರುವಾಗ ಸುಶರ್ಮ, ಅಶ್ವತ್ಥಾಮ ಅವರು ತನ್ನನ್ನು ಅಡ್ಡಗಟ್ಟಿದಾಗ, ಅವರನ್ನು ನಿವಾರಿಸಿ  ಬಂದ ಕಾರಣ ತಾನು ಬರುವುದು ತಡವಾಯಿತು ಎಂದು ವಿವರಿಸುತ್ತಾನೆ.
   ಕೌರವರ ಜತೆ ಯುದ್ಧದಲ್ಲಿ ನಿರತನಾದ ಕಾರಣದಿಂದ ತಡವಾಯಿತು,ಇಲ್ಲವಾದರೆ ಅರ್ಜುನ ತನ್ನ ಕಾಪಾಡಲು ಬಹಳ ಬೇಗ ಬರುತ್ತಿದ್ದ..ಆಹಾ ಎಂಬ ವ್ಯಂಗ್ಯದ ಮಾತನ್ನು ಧರ್ಮರಾಯ ಆಡುತ್ತಾನೆ. ತನಗೆ ಅಭ್ಯಾಸವಾಗಿರುವ ವನವಾಸವೇ ಸಾಕು, ಸಿರಿಯೇ ಬೇಕು ಅನಿಸಿದರೆ ಸಂಧಿ ಮಾಡಿಕೊಂಡು ಬದುಕಿದರಾಯಿತು, ಧೃತರಾಷ್ಟ್ರನ ಸೇವೆ ಮಾಡುತ್ತಾ ಇರಬಹುದು ಎಂದೂ ಉದ್ಗರಿಸುತ್ತಾನೆ.
“ಅರಳಿಚದೆ ಮಧುಮಾಸ ಮಾಣಲಿ ವರುಷ ಋತುವೇ ಸಾಕು ಜಾತಿಗೆ ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ| ಸಿರಿಗೆ ಕಕ್ಕುಲಿತೆಯೇ ವಿಪಕ್ಷವ ಬೆರಸಿ ಬದುಕುವೆವೈಸಲೇ ವರಗುರುವಲಾ ಧೃತರಾಷ್ಟ್ರನೂಣಯವೇನು ಹೇಳೆಂದ..[ಪ-೩೨]
ಮುಂದುವರೆದು “ಬರಿದೆ ಬಯಸಿದಡಹುದೆ ರಾಜ್ಯದ ಹೊರಿಗೆಯನು ನಿಶ್ಯಂಕೆಯಲಿ ಹೊಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ ಇರಿದು ಮೇಣ್ ಕುಕ್ಕುರಿಸುವರೆ ರಾಧೇಯನಂತಿರಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ” [ಪ-೩೩] ಎಂದು ತೀರ್ಮಾನಿಸುತ್ತಾನೆ.
ಧರ್ಮರಾಯನ ಈ ಎಲ್ಲ ಮಾತುಗಳು ಅಭಿವ್ಯಕ್ತಿಸುವ ಭಾವಗಳನ್ನು ಗಮನಿಸಬೇಕು.
೧] ಬೇಸರ ಮತ್ತು ವಿಷಾದ-ಅರ್ಜುನನಿಗೆ ತನ್ನನ್ನು ರಕ್ಷಿಸುವಲ್ಲಿ ತೀವ್ರತೆ ಇರಲಿಲ್ಲ (......ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ ಬಂದು ಬಯಲಗ್ಗಳಿಕೆಯನೆ ಬಿಡೆ ಕೆದರುತಿಹೆ...ಸಂ-೧೬,ಪ-೨೬)
೨] ನಿರಾಶೆ.[ಪ-೩೨]
೩] ಶಂಕೆ.[ಪ-೧೭,೧೮,೧೯,೨೦,೨೧]
೪] ನಿರೀಕ್ಷೆ-ಜಯದ ನಿರೀಕ್ಷೆ ಮತ್ತು ಆ ನಿರೀಕ್ಷೆ ಈಡೇರಿಸುವ ವೀರರು ತಮ್ಮ ಪಕ್ಷದಲ್ಲಿಇಲ್ಲ ಎಂಬ ಸಂದೇಹ. ಅಂದರೆ ಭೀಮಾರ್ಜುನರ ಬಗ್ಗೆ ಅನುಮಾನ.[ಪ-೩೩]
   ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ.ಯುದ್ಧದಲ್ಲಿ ತಾನು ಸೋತ ಅನಂತರ ಕರ್ಣನನ್ನು ಯಾರಿಗೂ ಸೋಲಿಸಲು ಆಗುವುದಿಲ್ಲ ಮತ್ತು ಆ ಕಾರಣದಿಂದ ತಮಗೆ ರಾಜ್ಯ ಸಿಗುವುದಿಲ್ಲ ಎಂಬ ಧರ್ಮರಾಯನ ಭಾವನೆ ಅವನ ಈ ಎಲ್ಲ ವರ್ತನೆಗಳನ್ನು ಪ್ರಚೋದಿಸಿದೆ.ಕರ್ಣ ಅವನನ್ನು ಹೀಯಾಳಿಸಿದ್ದು,( ೧] ಕೌರವರಾಯನನು ಮರೆವೊಕ್ಕು ಬದುಕಾ (ಕ.ಪ, ಸಂ-೧೧,ಪ-೫೭)
೨] ನಿಮಗೀ ಕದನ ಕರ್ಕಶವಿದ್ಯೆಯೇಕೆಂದ..(ಪ-೫೯)
   ಅಥವಾ ತಾಯಿಗೆ ಮಾತು ಕೊಟ್ಟಿರುವ ಕಾರಣಕ್ಕಾಗಿ ನಿನ್ನ ಕೊಲ್ಲುವುದಿಲ್ಲ(ಕೊಲುವೆಡವ್ವೆಗೆ ಕೊಟ್ಟಮಾತಿಂಗಳುಕುವೆನು ನೀ ಹೋಗು...(ಸಂ-೧೧,ಪ-೬೧) ಎಂಬ ಕರ್ಣನ ಮಾತು ಧರ್ಮರಾಯನಲ್ಲಿ ಯಾವುದೇ ಭಾವನೆಯನ್ನು ಅಥವ ಕುತೂಹಲವನ್ನು ಹುಟ್ಟಿಸಿಲ್ಲ.
ಅದೇ ಸಂದರ್ಭದಲ್ಲಿ ಅರ್ಜುನನಿಗೆ ಇರುವ ಭಾವನೆಗಳು.
೧] ದುಃಖ ಮತ್ತು ಪ್ರೀತಿ-ಧರ್ಮರಾಯನ ಸ್ಥಿತಿಯನ್ನು ಕಂಡು ದುಃಖ. ಅವನನ್ನು ಬಿಟ್ಟು ತಾನಿರಲಾರೆ ಎಂಬ ಅವನ ಮಾತು.(ಸಂ-೧೪,ಪ-೧೧,೧೨)

೨] ಅಸಹಾಯಕತೆ- ಸುಶರ್ಮ ಮತ್ತು ಅಶ್ವತ್ಥಾಮ ತನ್ನನ್ನು ತಡೆದ ಕಾರಣ ತಾನು ಕಾಪಾಡಲು ಆಗಲಿಲ್ಲ.
೩] ಭರವಸೆ.-ಕರ್ಣನನ್ನು ಕೊಲ್ಲುತ್ತೇನೆ .
   ಪ್ರಸ್ತುತ ಸನ್ನಿವೇಶಕ್ಕೆ ತಕ್ಕುದಾಗಿರುವ ಪ್ರತಿಕ್ರಿಯೆ ಅರ್ಜುನನದು. ಅಣ್ಣನ ಮೇಲಿರುವ ಪ್ರೀತಿ, ಗೌರವ ಅವನ ಈಗಿನ ಸ್ಥಿತಿಯನ್ನು ಕಂಡು ದುಃಖಿಸುವಂತೆ ಮಾಡಿದೆ. ನನ್ನನ್ನು ನೀನು ಕಾಪಾಡಲಿಲ್ಲ ಎಂಬ ಅರೋಪಕ್ಕೆ ಅವನು ಕೊಡುವ ವಿವರಣೆ ಸತ್ಯ ಮತ್ತು ಸಹಜವಾದದ್ದು. ಕರ್ಣನ ವೀರತ್ವದ ಬಗ್ಗೆ ಅವನಾಡಿದ ಯಾವ ಮಾತನ್ನೂ ನಿರಾಕರಿಸದೆ ತಾನು ಅವನನ್ನು ಕೊಲ್ಲುತ್ತೇನೆ ಎಂಬಷ್ಟೆ ಮಾತು ಕೂಡ ಸಹಜವಾದ ಪ್ರತಿಕ್ರಿಯೆ.
   ಆದರೆ ಈ ಅಭಿಪ್ರಾಯಗಳನ್ನು ಧರ್ಮರಾಯನ ವರ್ತನೆಗಳಿಗೆ ಅನ್ವಯಿಸುವುದು ಕಷ್ಟ. ಯುದ್ಧದಲ್ಲಿ ಅಪಜಯವಾಗಬಾರದು, ಗಾಯವಾಗಬಾರದು ಎಂಬ ಅವನ ನಿರೀಕ್ಷೆ ತಪ್ಪು. ಯುದ್ಧದಲ್ಲಿ ತನ್ನನ್ನು ಅರ್ಜುನ ಬಂದು ಕಾಪಾಡಬೇಕು ಎಂಬ ಅವನ ನಿರೀಕ್ಷೆಯೂ ತಪ್ಪು. ಅವೆಲ್ಲಕ್ಕಿಂತ ಮುಖ್ಯವಾಗಿ ಅವನ ಈ ದುಃಸ್ಥಿತಿಗೆ ಅರ್ಜುನ ಕಾರಣ ಎಂಬ ಆಪಾದನೆ ಔಚಿತ್ಯ ಮೀರಿದ ಮಾತು. ಆದರೂ ಆತ ಆಡಿದ್ದನ್ನು ಗಮನಿಸಿದರೆ ವರ್ತಮಾನದ ತಲ್ಲಣಗಳು ಮನುಷ್ಯನ ಒಳಗೆ ಸುಪ್ತವಾಗಿರುವ ಗುಣವನ್ನು ಅಥವ ಅವಗುಣವನ್ನು ಹೇಗೆ ಪ್ರಕಟಪಡಿಸುತ್ತವೆ ಎಂಬುದರ ಸೂಚಕವಾಗುತ್ತದೆ. ಇದೇ ಧರ್ಮರಾಯ ತುಂಬಿದ ಸಭೆಯಲ್ಲಿ ದ್ರೌಪದಿಗೆ ಅವಮಾನವಾಗುತ್ತಿದ್ದಾಗ ಮೌನಿಯಾಗಿದ್ದ, ಮಾತ್ರವಲ್ಲ ಭೀಮನನ್ನು ಸುಮ್ಮನಾಗಿರಿಸಿದ್ದ. ಆ ಸ್ಥಿತಿ ಅವನ ವೈಯಕ್ತಿಕ ಅನುಭವವಾಗಿರದ ಕಾರಣ ಅವನು ಅದನ್ನು ಧರ್ಮದ ಹಿನ್ನೆಲೆಯಲ್ಲಿ ಶೋಧಿಸಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ಧರ್ಮದ ಹಿನ್ನೆಲೆ ಅವನ ವರ್ತನೆಗಳನ್ನು ನಿಯಂತ್ರಿಸಿತು.ಇಲ್ಲಿ ಅನುಭವ ವೈಯಕ್ತಿಕವಾದದ್ದು. ಅನುಭವ ವೈಯಕ್ತಿಕವಾಗಿರುವಾಗ ಪ್ರತಿಕ್ರಿಯೆಯೂ ನಿಯಮಗಳನ್ನು ಮೀರಿ ವೈಯಕ್ತಿಕವಾಗಿಬಿಟ್ಟಿದೆ. ತಾನು ಅನುಭವಿಸುವಾಗ ನಿಯಮಪಾಲನೆಯನ್ನು  ಉಲ್ಲಂಘಿಸುವುದು ಅವನ ಅರಿವನ್ನೂ ಮೀರಿ ನಡೆದುಬಿಡಬಹುದು. ಅಥವಾ ಅಂತಹ ಸಂದರ್ಭಗಳಲ್ಲಿ ನಿಯಮಗಳನ್ನು ಅನ್ವಯಿಸಲು ಅಗತ್ಯವಿರುವ ವಿವೇಚನಾಶಕ್ತಿ ಕುಂಠಿತವಾಗಬಹುದು. ಅಥವಾ ತನ್ನ ವಿಫಲತೆಯ ಕಾರಣಗಳನ್ನು ತನ್ನ ಹೊರತಾದ ಮತ್ತೊಂದರಲ್ಲಿ ಹುಡುಕುವ ಸ್ವಭಾವ ಇರಬಹುದು.
   ತಾನು ಮತ್ತೆ ವನವಾಸಕ್ಕೆ ಹೋಗಲು ಸಿದ್ಧ ಅಥವ ಧೃತರಾಷ್ಟ್ರನ ಸೇವೆ ಮಾಡುತ್ತಾ ಇರುತ್ತೇನೆ. ನಿನಗೆ ಯುದ್ಧದಲ್ಲಿ ಗೆಲ್ಲುವ ಆಸೆ ಇದ್ದರೆ ನಿನ್ನ ಗಾಂಡಿವವನ್ನು ಕೃಷ್ಣನಿಗೆ ಕೊಟ್ಟು ನೀನು ಅವನ ಸಾರಥಿಯಾಗು ಎಂಬ ಅತಿ ವ್ಯಂಗ್ಯದ ಮಾತನ್ನು ಧರ್ಮರಾಯ ಆಡುತ್ತಾನೆ.(ಬವರ ಗೆಲುವರೆ ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀ.......ಸಂ-೧೬,ಪ-೩೪)
***
   ಈ ಮಾತನ್ನು ಕೇಳಿದ ಅರ್ಜುನ ಕತ್ತಿಯನ್ನು ಹಿಡಿದು ಧರ್ಮರಾಯನನ್ನು ಕೊಲ್ಲಲು ಹೊರಡುತ್ತಾನೆ.ತನ್ನ ಗಾಂಡಿವದ ಬಗ್ಗೆ ಅವಹೇಳನೆಯ ಮಾತನ್ನು ಆಡಿದವರನ್ನು ಕೊಲ್ಲುತ್ತೇನೆ ಎಂಬುದು ಅವನು ತಾನಾಗಿಯೇ ಮಾಡಿಕೊಂಡ ಶಪಥ.
“........ಮೇಲುಮೇಲುಬ್ಬೇಳ್ವ ರೋಷಜ್ವಾಲೆ ಹೊದಿಸಿತು ವದನವನು ಕಣ್ಣಾಲಿ ಕಾಹೇರಿದವು ......(ಸಂ-೧೭,ಪ-೧)
ಮುಖದಲ್ಲಿ ಸಿಟ್ಟು ಉಕ್ಕಿತು. ಕಣ್ಣು ಸಿಟ್ಟಿಂದ ಕಾದವು. ಧರ್ಮರಾಯನ ರಥ ಬಿಡಾರಕ್ಕೆ ಮರಳುವುದು ಕಂಡಾಗ, ಅವನಿಗೇನಾಯಿತೋ ಎಂಬ ಶಂಕೆ ಹುಟ್ಟಿದ್ದಾಗ, ಸೊಂಪಡಗಿದ್ದ ಮುಖ ಮತ್ತು ನೀರು ತುಂಬಿದ್ದ ಕಣ್ಣುಗಳೇ ಈಗ ಸಂಪೂರ್ಣ ಭಿನ್ನ ಭಾವವನ್ನು ಪ್ರಕಟಿಸುತ್ತಿವೆ. ಅಣ್ಣನಿಲ್ಲದೆ ತಾನು ಬದುಕಿರಲಾರೆ ಎಂದ ಅರ್ಜುನ ಈಗ ಅಣ್ಣನನ್ನು ಉಳಿಸುವುದಿಲ್ಲ ಎಂದು ಹೊರಟಿದ್ದಾನೆ. ತನ್ನ ಬಗ್ಗೆ ಆಡಿದ ಎಲ್ಲ ಅವಹೇಳನವನ್ನೂ ಸಂಯಮದಿಂದ ಸ್ವೀಕರಿಸಿದ್ದ ಅರ್ಜುನ ಗಾಂಡಿವದ ಬಗ್ಗೆ ಆಡಿದ ಮಾತಿಗೆ ವ್ಯಗ್ರನಾಗಿದ್ದಾನೆ.
   ಅರ್ಜುನನ ಈ ವರ್ತನೆ ಧರ್ಮರಾಯ ಅವನನ್ನು ಹೀಯಾಳಿಸಿದ್ದಕ್ಕೆ ಅಥವ ಕರ್ಣನನ್ನು ಹೊಗಳಿದ್ದಕ್ಕೆ ಅಲ್ಲ. ಧರ್ಮರಾಯನ ಆ ಮಾತುಗಳಿಗೆ ಅರ್ಜುನ ಸ್ವಾಭಾವಿಕವಾದ ನೆಲೆಯಲ್ಲಿ ಪ್ರತಿಕ್ರಿಯೆ ತೋರಿಸಿದ್ದಾನೆ. ಆದರೆ ಇಲ್ಲಿ ಆತ ವ್ಯಗ್ರನಾಗಲು ಕಾರಣ ಗಾಂಡೀವ ಹಿಡಿಯಲು ತಾನು ಯೋಗ್ಯನಲ್ಲ ಎಂಬ ಧರ್ಮರಾಯನ ಮಾತು. ಇಲ್ಲಿ ಅವನ ವರ್ತನೆ ಬದಲಾಗಲು ಅವನ ತನಗೆ ತಾನೇ ಮಾಡಿಕೊಂಡಿರುವ ಶಪಥ. ಅಂದರೆ ಧರ್ಮರಾಯನ ಮಾತುಗಳಿಗಿಂತ, ತನ್ನ ಶಪಥಕ್ಕೆ ಆದ ಅವಹೇಳನ ಅವನ ವರ್ತನೆಯನ್ನು ಪ್ರಚೋದಿಸಿದೆ.

   ಹೀಗೆ ಬದಲಾದ ಅರ್ಜುನ ಒರೆಯಿಂದ ತನ್ನ ಕತ್ತಿಯನ್ನು ತೆಗೆದು “ರೌದ್ರಸ್ಥಾಯಿಭಾವದ ಭಾರದಲಿ” ಧರ್ಮರಾಯನತ್ತ ನಡೆದ. ಗಾಬರಿಗೊಂಡ ದ್ರೌಪದಿ ಅಡ್ಡಬರುತ್ತಾಳೆ. ಉಳಿದವರು ಶೋಕಿತರಾಗುತ್ತಾರೆ. ಕೃಷ್ಣ ಅರ್ಜುನನನ್ನು ಹಿಡಿದುಕೊಳ್ಳುತ್ತಾನೆ. ಅವನನ್ನು ತಡೆಯಬೇಡಿ, ಆತನ ರಾಜಕಾರ್ಯವನ್ನು ಕೆಡಿಸಬೇಡಿ, ತನ್ನ ಕಣ್ಣೀರಿನಿಂದಲೇ ತನ್ನನ್ನು ಅವನಿಗೆ ಧಾರೆಯೆರೆದೆ ಎಂದು ಧರ್ಮರಾಯ ಉದ್ಗರಿಸುತ್ತಾನೆ. ಅರ್ಜುನ ತನ್ನನ್ನು ಕೊಲ್ಲಲು ಹೊರಟಿದ್ದಾನೆ ಎಂಬುದು ಧರ್ಮರಾಯನಿಗೆ ಹೊಳೆದಿದೆ. ಆದರೆ ಈಗಲೂ ತನ್ನ ತಪ್ಪೇನು ಎಂಬುದು ಹೊಳೆದಿಲ್ಲ. ಅಥವಾ ಅರ್ಜುನನ ಈ ಪ್ರತಿಕ್ರಿಯೆಗೆ ಕಾರಣವನ್ನು ತಿಳಿಯುವ ವ್ಯವಧಾನವಿಲ್ಲ. ನಿನ್ನ ಈ ವರ್ತನೆಗೆ ಕಾರಣವೇನು ಎಂದು ಕೃಷ್ಣ ಅರ್ಜುನನನ್ನು ವಿಚಾರಿಸಿದಾಗ, ನಿನಗೆ ಗಾಂಡೀವವೇತಕೆ ಎಂದು ಅವಹೇಳನ ಮಾಡಿದವರನ್ನು ನಾನು ಉಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ, ಈಗ ಈ ಅರಸ ಆ ನ್ಯಾಯವಲ್ಲದ ಮಾತನ್ನು ಆಡಿದ್ದು ನೀವೆಲ್ಲ ಕೇಳಿದಿರಿ, ಅದು ಸರಿಯೇ ಕೃಷ್ಣ ನೀನು ಹೇಳು  ಎಂದು ಅರ್ಜುನ ಉತ್ತರಿಸುತ್ತಾನೆ. ಅವನ ಆ ಮಾತನ್ನು ಕೇಳಿದ ಧರ್ಮರಾಯ ತಮ್ಮನ ಭಾಷೆ ಉಳಿಯಲಿ, ತನಗೆ ರಾಜ್ಯ, ಶರೀರ ಎರಡರ ಮೇಲೂ ಆಸೆಯಿಲ್ಲ ಎಂದು ಉತ್ತರಿಸುತ್ತಾನೆ.(ಸಂ-೧೭,ಪ-೧೦ ....ಲೇಸುಲೇಸಿದು ತಮ್ಮನಾಡಿದ ಭಾಷೆ ಬಾಹಿರವಾಗಬೇಡ ವಿನಾಶಕಾನಂಜೆನು.........ಆಶೆಯೆನಗೀ ರಾಜ್ಯದಲಿ ಮೇಣೀ ಶರೀರದಲಿಲ್ಲ......) ಅರ್ಜುನ ಪ್ರಶ್ನೆ ಕೇಳಿದ್ದು ಕೃಷ್ಣನಿಗೆ, ಉತ್ತರ ಕೊಟ್ಟಿದ್ದು ಧರ್ಮರಾಯ. ಆ ಉತ್ತರವೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಉತ್ತರವಲ್ಲ, ಇನ್ನಷ್ಟು ಹದಗೆಡಿಸುವ ಉತ್ತರ. ಈ ಸಮಸ್ಯೆಗೆ ವ್ಯಾವಹಾರಿಕವಾದ ಉತ್ತರವಿಲ್ಲ ಎಂಬುದನ್ನು ಗ್ರಹಿಸಿದ ಕೃಷ್ಣ, ಧರ್ಮರಾಯನನ್ನು ಸುಮ್ಮನಿರೆಂದು ಗದರಿಸಿ (ಪ-೧೧....ಮರುಳೆ ಮೋನದೊಳಿರು) ಅರ್ಜುನನಿಗೆ, ಅಣ್ಣನನ್ನು ಕೊಲ್ಲಬಯಸುವ ಅವನ ಕ್ರಿಯೆ ಧರ್ಮವಲ್ಲ ಎಂದು ವಿವರಿಸುತ್ತಾನೆ. ವೈಯಕ್ತಿಕ ನೆಲೆಯಲ್ಲಿ ಹುಟ್ಟಿದ ಸಂಘರ್ಷವನ್ನು ಧರ್ಮದ ನೆಲೆಯಲ್ಲಿ ವಿವರಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ತಂತ್ರಗಾರಿಕೆ ಕೃಷ್ಣನದು.   
   ಅರ್ಜುನನಲ್ಲಿ ಇದು ಒಂದು ಬಿಕ್ಕಟ್ಟನ್ನು ಹುಟ್ಟಿಸುತ್ತದೆ. ಪ್ರತಿಜ್ಞೆ ಈಡೇರಿಸದಿರುವುದು ವೈಯಕ್ತಿಕ ನೆಲೆಯಲ್ಲಿ ಅವಮಾನದ ಸಂಗತಿ, ಸ್ವಧರ್ಮವಲ್ಲ. ಕೃಷ್ಣ ಹೇಳುತ್ತಾನೆ ಪ್ರತಿಜ್ಞೆ ಈಡೇರಿಸುವುದು ಅಧರ್ಮದ ಕಾರ್ಯ. ಈ ಬಿಕ್ಕಟ್ಟನ್ನು, ಬಿಕ್ಕಟ್ಟು ಹುಟ್ಟಲು ಕಾರಣವಾದ ಕೃಷ್ಣನೇ ಪರಿಹರಿಸಬೇಕು. ಅರ್ಜುನ ಹಾಗಿದ್ದರೆ ತನ್ನ ಪ್ರತಿಜ್ಞೆ ನೆರವೇರಬೇಕು, ಅಣ್ಣ ಸಾಯಲೂ ಬಾರದ ಆ ಉಪಾಯವನ್ನು ನೀನೇ ಹೇಳು ಎಂದು ವಿನಂತಿಸುತ್ತಾನೆ. 
“ಆವ ಪರಿಯಲಿ ತನ್ನ ಸತ್ಯದ ಠಾವು ನಿಲುವುದು ರಾಯನುಪಹತಿ ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ” (ಸಂ-೧೭,ಪ-೨೫)
   ಈ ಪ್ರಶ್ನೆ ಕೃಷ್ಣನಲ್ಲೂ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಗಾಂಡಿವವನ್ನು ತ್ಯಜಿಸು ಎಂದವರನ್ನು ಕೊಲ್ಲುತ್ತೇನೆ ಎಂಬ ಅರ್ಜುನನ ಪ್ರತಿಜ್ಞೆ ಭಂಗವಾಗುವ ಹಾಗಿಲ್ಲ. ಹಾಗಂತ ಅದು ಪ್ರಸ್ತುತ ಸನ್ನಿವೇಶದಲ್ಲಿ ನೆರವೇರಲೂಬಾರದು. ಪ್ರತಿಜ್ಞೆ ಭಂಗವಾಗುವುದು ಸರಿ ಎಂದು ಕೃಷ್ಣ ಹೇಳುವಂತಿಲ್ಲ, ಪ್ರತಿಜ್ಞೆ ನೆರವೇರಲಿ ಎಂದೂ ಹೇಳುವಂತಿಲ್ಲ.ಇದು ಕೃಷ್ಣನ ಸಮಸ್ಯೆ. ಗಮನಿಸಬೇಕಾದ ಅಂಶವೆಂದರೆ ಧರ್ಮರಾಯನಿಗೆ ಈ ಬಿಕ್ಕಟ್ಟು ತಟ್ಟಿಯೇ ಇಲ್ಲ. ಅರ್ಜುನನ ಮನಸ್ಸಿನ ತಾಕಲಾಟಕ್ಕೆ ಆತ ಸಂಪೂರ್ಣ ಸಂವೇದನಾಶೀಲರಹಿತನಾಗಿದ್ದಾನೆ. ಅವನ ವರ್ತನೆಗಳನ್ನು ಈಗಲೂ ಸಧ್ಯದ ಸನ್ನಿವೇಶದ ಬದಲು ಹಿಂದೆ ನಡೆದ ಘಟನೆಯೇ ನಿಯಂತ್ರಿಸುತ್ತಿದೆ.  ತನ್ನನ್ನು ಕೊಂದು ಅರ್ಜುನ ತನ್ನ ಭಾಷೆಯನ್ನುಳಿಸಿಕೊಳ್ಳಲಿ ಎಂದು ಬಿಡುತ್ತಾನೆ.
    ವ್ಯಾವಹಾರಿಕವಾಗಿ ಬಗೆಹರಿಸಲಾರದ ಸಮಸ್ಯೆ ಇದು ಎಂದರಿತ ಕೃಷ್ಣ, ಅದನ್ನು ಪರಿಹರಿಸಲು, ಮಾನವಂತನಾದ ಧರ್ಮರಾಯನನ್ನು ನೀನು ಅವಹೇಳನ ಮಾಡು, ಅದು ಸಾವಿಗೆ ಸಮಾನ ಎಂದು ಅರ್ಜುನನಿಗೆ ಸೂಚಿಸುತ್ತಾನೆ.
“.....ಲೋಗರ ಹಳಿವುದೇ ವಧೆ....”(ಪ-೨೬)
ಅವನ ಸಲಹೆಯನುಸಾರವಾಗಿ ಅರ್ಜುನ ಧರ್ಮರಾಯನನ್ನು ಹೀಯಾಳಿಸುತ್ತಾನೆ.
೧] ನೆಲನ ಕೊಂಡರು ನಿನ್ನ ಮೋರೆಯ ಬಲುಹು ಕಂಡೇ ಕೌರವರು (ಸಂ-೧೭,ಪ-೨೮)
೨] ನಿನ್ನ ಜೂಜಿನ ವಿಲಗದಲಿ ಸಂಪನ್ನ ರಾಜ್ಯವ ಬಿಸುಟು ನಿನ್ನಯ ಬೆನ್ನಲಿ ಅಡವಿಯಲಾಡಿದೆವು (ಪ-೨೯)
೩] ರಣದ ಘಾರಾಘಾರಿಯಾರೋಗಣೆಯ ಮನೆಯಲ್ಲ..(ಪ-೩೦)
೪]ಒಂದು ತೂರಂಬಿನಲಿ ಗಡ ನೀನಿಂದು ಜೀವವ ಜಾರಿಸುವೆ ಸುಡಲಿಂದುಕುಲಕಂಟಕರಿನಿರಿದರೆ ದೋಷವೇನೆಂದ(ಪ-೩೨)
   ಅರ್ಜುನನ ಈ ಮಾತುಗಳು ತುಂಬಾ ಕುತೂಹಲಕಾರಿಯಾಗಿವೆ. ಆತ ಧರ್ಮರಾಯ ಮಾಡದೇ ಇರುವುದನ್ನು ಹೇಳಿ ಹೀಯಾಳಿಸುತ್ತಿಲ್ಲ, ಆತನಿಂದ ಘಟಿಸಿದ್ದನ್ನೇ ಹೇಳುತ್ತಿದ್ದಾನೆ. ಆ ಘಟನೆಗಳು ನಡೆದಾಗ, ಅವು ತಪ್ಪು ಎಂದು ಹೇಳಿರದಿದ್ದ ಅರ್ಜುನ ಈಗ ಅವು ತಪ್ಪು ಎಂದು ಘೋಷಿಸುತ್ತಿದ್ದಾನೆ. ಆತ ಇಲ್ಲಿ ಹೇಳುತ್ತಿರುವುದು ಧರ್ಮರಾಯನ ದೌರ್ಬಲ್ಯಗಳನ್ನು ಮತ್ತು ಆ ದೌರ್ಬಲ್ಯಗಳು ಹುಟ್ಟಿಸಿದ ಪರಿಣಾಮಗಳನ್ನು. ಅರ್ಜುನನ ಮನಸ್ಸಿನಲ್ಲಿ ಸುಪ್ತವಾಗಿ ಧರ್ಮರಾಯನ ಬಗ್ಗೆ ಈ ಅಭಿಪ್ರಾಯಗಳು ಹುದುಗಿದ್ದವು. ಅಣ್ಣ ದೇವರ ಸಮಾನ ಎಂಬ ಸಾಮಾಜಿಕ ಮತ್ತು ಧಾರ್ಮಿಕವಾಗಿರಬಹುದಾದ ನಂಬಿಕೆಯಿಂದ ಆತ ಸುಮ್ಮನಿದ್ದನೇ ಹೊರತು ಧರ್ಮರಾಯನ ವರ್ತನೆಗಳನ್ನು ಪೂರ್ಣ ಮನಸ್ಸಿಂದ ಒಪ್ಪಿ ಬೆಂಬಲಿಸಿ ಅಲ್ಲ ಎಂಬ ಅನುಮಾನ ಬರುತ್ತದೆ. ಅಣ್ಣನ ಕೈಗಳನ್ನು ಸುಟ್ಟುಬಿಡುತ್ತೇನೆ ಎಂದು ದ್ಯೂತದ ಸಮಯದಲ್ಲಿ ಎದ್ದು ನಿಂತಿದ್ದ ಭೀಮನನ್ನು ನಿಯಂತ್ರಿಸಿದ್ದ ಅರ್ಜುನ, ಇವತ್ತು ಕುಲಕಂಟಕರನಿರಿದರೆ ದೋಷವೇನು ಎಂದು ಪ್ರಶ್ನಿಸುತ್ತಾನೆ. ಅಲ್ಲಿ ಕೈಯನ್ನು ಸುಡುವುದು ಅಧರ್ಮವಾಗಿತ್ತು. ಇಲ್ಲಿ ಧರ್ಮರಾಯ ಕುಲಕಂಟಕ ಮತ್ತು ಅವನನ್ನು ಕೊಲ್ಲುವುದು ತಪ್ಪಲ್ಲ. ಈ ಕೊನೆಯ ಮಾತು ಧರ್ಮರಾಯನ ದೋಷವನ್ನು ಹೇಳುವ ಮಾತಲ್ಲ. ಕೃಷ್ಣ ಹೇಳಿದ್ದು ಅವನನ್ನು ಹೀಯಾಳಿಸು ಎಂದು. ಆದರೆ ಈ ಕೊನೆಯ ಮಾತಲ್ಲಿ ಅರ್ಜುನ ತಾನು ಮಾಡಲು ಹೊರಟಿದ್ದ ತನ್ನ ಕೃತ್ಯದ ಸಮರ್ಥನೆ ಮಾಡಿಕೊಂಡ ಮತ್ತು ಧರ್ಮರಾಯನನ್ನು ಕೊಂದರೆ ತಪ್ಪಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ. ಧರ್ಮರಾಯನನ್ನು ’ಇಂದುಕುಲಕಂಟಕ’ ಎಂದು ಎಂದದ್ದು ಮಾತ್ರವಲ್ಲದೆ ಅವನನ್ನು ಕೊಲ್ಲುವುದು ದೋಷವಲ್ಲ ಎಂದೇ ಅನ್ನುತ್ತಾನೆ. ಇದು ಹೀಯಾಳಿಕೆಯ ಗಡಿಯನ್ನು ದಾಟಿ ತೀರ್ಮಾನದ ರೂಪವನ್ನು ಪಡೆದಿದೆ.
   ಈ ಮಾತು ಅತ್ಯಂತ ವಿಚಿತ್ರವಾಗಿ ಅರ್ಜುನ ಮತ್ತು ಧರ್ಮರಾಯ ಇಬ್ಬರ ಮೇಲೂ ಪರಿಣಾಮ ಬೀರುತ್ತದೆ. ಕೃಷ್ಣ ತಮ್ಮ ದೈವ, ರಕ್ಷಕ, ಹಿತೈಷಿ ಮತ್ತು ಕೃಷ್ಣನ ಸಲಹೆಯಂತೆ ಆಡಿದ ಮಾತುಗಳಿವು ಎಂಬ ಅರಿವು ಇಬ್ಬರಿಗೂ ಇರುವುದರಿಂದ  ಪ್ರಸಂಗ ಅಲ್ಲಿಗೇ ಮುಗಿಯಬೇಕಿತ್ತು. ಹಾಗಾಗುವುದಿಲ್ಲ.
   ಮನುಷ್ಯನ ಸಂವೇದನೆ ಯಾವ ರೀತಿಯಲ್ಲಿ ಯಾವಾಗ ವರ್ತಿಸುತ್ತದೆ ಎಂಬುದು ಅನೂಹ್ಯ. ಹೀಗೆ ಮಾಡು ಎಂಬ ಸಲಹೆ ಕೃಷ್ಣನದು. ಕ್ರಿಯೆ, (ಹೀಯಾಳಿಸುವುದು) ಕೃಷ್ಣನ ಸಲಹೆಯನ್ನು ಪಾಲಿಸಿದೆ. ಆದರೆ ಕ್ರಿಯೆಯ ಪರಿಣಾಮ ವೈಯಕ್ತಿಕವಾದದ್ದು, ಅದರ ಮೇಲೆ ಸಲಹೆ ನೀಡಿದವನ ನಿಯಂತ್ರಣವಿಲ್ಲ. ಪ್ರತಿಕ್ರಿಯೆ ಹೀಗೇ ಇರಲಿ ಎಂದು ಕೃಷ್ಣ ನಿಯಮಿಸುವಂತಿಲ್ಲ. ಅದು ಧರ್ಮರಾಯ ಮತ್ತು ಅರ್ಜುನ ಅವರಿಬ್ಬರ ಸಂವೇದನೆಯ ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿದೆ.
ಅಂತೆಯೇ ಆಗಿದೆ.
   ಅರ್ಜುನ: ಒರೆಯಿಂದ ಕತ್ತಿಯನ್ನು ಮತ್ತೆ ಎಳೆದು ತನ್ನನ್ನು ಕೊಂದುಕೊಳ್ಳಲು ಹೊರಡುವುದು.(ಸಂ-೧೭,ಪ-೩೩).ಧರ್ಮರಾಯನನ್ನು ಕೊಂದ ಬಳಿಕ ತನಗೂ ಬದುಕು ಬೇಡ ಎಂಬುದು ಅವನು ಈ ಕೃತ್ಯಕ್ಕೆ ನೀಡುವ ಸಮರ್ಥನೆ.(ಪ-೩೪)
   ಇದನ್ನು ತಡೆಯುವ ಕೃಷ್ಣ ಆತ್ಮಹತ್ಯೆ ಮಹಾಪಾಪ ಎಂದು ಅರ್ಜುನನಿಗೆ ಹೇಳಿ, ತನ್ನನ್ನು ತಾನೇ ಹೊಗಳಿಕೊಳ್ಳುವುದು ಸಾವಿಗೆ ಸಮಾನ,  ನಿನ್ನ ನೀನೆ ಹೊಗಳಿಕೊಂಡು ನಿನ್ನನ್ನು ಕೊಂದುಕೋ ಎಂಬ ಸಲಹೆ ನೀಡುತ್ತಾನೆ. ಪರರನ್ನು ತೆಗಳುವುದು ಪರರನ್ನು ಕೊಂದಂತಾದರೆ, ತನ್ನ ಬಗ್ಗೆಯೇ ತನ್ನ ಹೊಗಳಿಕೆ ತನ್ನನ್ನು ಕೊಂದುಕೊಂಡಂತೆ.(...ನಿನ್ನಗ್ಗಳಿಕೆಗಳ ನೀನಾಡಿ ನಿನ್ನನೇ ಕೊಂದುಕೊಳ್ಳೆಂದ|| ಪ-೩೫). ಅರ್ಜುನ ಹಾಗೆಯೇ ಮಾಡುತ್ತಾನೆ.
ಧರ್ಮರಾಯ: ಇವನ ಪ್ರತಿಕ್ರಿಯೆ ಮಾತ್ರ ಸಂಪೂರ್ಣವಾಗಿ ಅನಿರೀಕ್ಷಿತವಾದದ್ದು.
೧) ಕೃಷ್ಣನಿಕ್ಕಿದ ಗಂಟಿನಲಿ ಸಿಲುಕದಿರು ತನ್ನಯ ಗಂಟಲಿದೆ ಶಸ್ತ್ರೌಘವಿದೆ(ಪ-೩೯)
೨) ಇರಿದ ಕರ್ಣನೇ ಸಾಲದೇ ಪೆಣನಿರಿದು ಪಗೆಯೇಕೆ..(ಪ-೪೧)
   ಕೃಷ್ಣನ ಮಾತಿನಲ್ಲಿ ಸಿಕ್ಕಿಕೊಳ್ಳಬೇಡ, ತನ್ನನ್ನು ಕೊಲ್ಲು, ಈಗಾಗಲೇ ಕರ್ಣನಿಂದ ಕೊಲ್ಲಲ್ಪಟ್ಟಿರುವ ತಾನು ಹೆಣಕ್ಕೆ ಸಮಾನ, ಯುದ್ಧದಲ್ಲಿ ಗೆದ್ದರೆ ಭೀಮನನ್ನು ಅರಸನನ್ನಾಗಿ ಮಾಡು, ನಕುಲ ಸಹದೇವರನ್ನು ಪಾಲಿಸು ಇತ್ಯಾದಿ ವಿನಂತಿಸಿಕೊಂಡ ಧರ್ಮರಾಯ ಎದ್ದು ಕಾಡಿಗೆ ಹೊರಡುತ್ತಾನೆ. ಅವನನ್ನು ದ್ರೌಪದಿ,ನಕುಲ,ಸಹದೇವರು ಉಳಿದವರು ಅನುಸರಿಸುತ್ತಾರೆ.
   ಕುಲಕಂಟಕ ಎಂಬ ಅರ್ಜುನನ ಮಾತು ಧರ್ಮರಾಯನನ್ನು ಇನ್ನಷ್ಟು ಘಾತಿಸುತ್ತದೆ. ಅದು ಅವನ ದೌರ್ಬಲ್ಯಗಳ ಬಗ್ಗೆ ಹೇಳಿದ ಮಾತಾಗದೆ ಅವನ ಮಟ್ಟಿಗೆ ಅವನ ವ್ಯಕ್ತಿತ್ವವನ್ನು ಅಳೆದ ಮಾತಾಗುತ್ತದೆ. ಆ ಹಿನ್ನೆಲೆಯಲ್ಲಿ ಅರ್ಜುನನ ಮಾತನ್ನು ಗ್ರಹಿಸಿದ ಆತ ಅರಮನೆಯಿಂದ ಕಾಡಿನತ್ತ ಹೊರಡುತ್ತಾನೆ. ಅನಂತರ ಅರ್ಜುನ ಹೋಗಿ ಅವನ ಕಾಲು ಹಿಡಿದು ಕ್ಷಮೆ ಕೋರುತ್ತಾನೆ. ಕೃಷ್ಣನೂ ಪಾರ್ಥನನ್ನು ಕ್ಷಮಿಸು ಎಂದು ಧರ್ಮರಾಯನಿಗೆ ಹೇಳುತ್ತಾನೆ. ಧರ್ಮರಾಯ ಒಪ್ಪಿ ಪ್ರಕರಣ ಸುಖಾಂತ್ಯವಾಗುತ್ತದೆ. ಹೀಗೆ ಒಪ್ಪುವಾಗಲೂ ಧರ್ಮರಾಯ ತಾನಾಡಿದ ಅನುಚಿತವಾದ ಮಾತಿಗೆ ಪಶ್ಚಾತಾಪ ವ್ಯಕ್ತಪಡಿಸುವುದಿಲ್ಲ. ಆತ ಅದರ ಕಾರಣ ದ್ವಾಪರ ಮತ್ತು ಕಲಿ ಸಂಧಿಸುತ್ತಿರುವ ಸಮಯದಲ್ಲಿ ಕಲಿಯ ಪ್ರಭಾವ ದ್ವಾಪರದ ಮೇಲೂ ಆಗುತ್ತಿರುವುದೇ ಈ ಮಾತಿನ ಯುದ್ಧಕ್ಕೆ ಕಾರಣ ಎಂದು ಅರ್ಥೈಸುತ್ತಾನೆ.
“ಹಿಂಗದಿನ್ನೂ ದ್ವಾಪರದ ಸರ್ವಾಂಗವೀ ದ್ವಾಪರದ ಸೀಮಾಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡಸೋಹಿನಲಿ ಸಂಗಡಿಸಿತಧೋರತ್ತರದ ಸಮರಂಗ....”
   ಸನ್ನಿವೇಶವನ್ನು ಅರ್ಥೈಸುವ ವಿಧಾನ ಮತ್ತು ಒಂದು ಅನುಚಿತವಾದ ಮಾತು ಹುಟ್ಟಿಸಬಹುದಾದ ಅನರ್ಥ ಪರಂಪರೆ ಯಾವ ಮಟ್ಟದ್ದಾಗಬಹುದು ಎಂಬುದು ಇಲ್ಲಿ ವ್ಯಕ್ತವಾಗಿದೆ. ಹರಿಗೆ ಕೊಡು ಗಾಂಡಿವವ ಎಂಬ ಅನುಚಿತ ಮಾತು ಧರ್ಮರಾಯನದು. ಆ ಮಾತಿನಿಂದ ಬೆಳೆದ ಸನ್ನಿವೇಶದ ಅಂತ್ಯದಲ್ಲಿ ಅರ್ಜುನನೇ ಧರ್ಮರಾಯನ ಕಾಲು ಹಿಡಿದು ಕ್ಷಮೆ ಕೇಳುವ ಹಂತ ತಲುಪಿದೆ. ತನ್ನ ಅನುಚಿತ ಮಾತಿಗೆ ಧರ್ಮರಾಯನ ಪ್ರತಿಕ್ರಿಯೆ ಏನು? ಆತ ಅಂತಹ ಮಾತಾಡಿದ್ದಕ್ಕೆ ಪಶಾತ್ತಾಪ ಕೂಡ ಪಡುವುದಿಲ್ಲ. ತನ್ನ ಶತಾಪರಾಧವನ್ನು ಮನ್ನಿಸು ಎಂದು ಅರ್ಜುನನೇ ಕಾಲಿಗೆ ಬೀಳುತ್ತಾನೆ. ಕುಮಾರವ್ಯಾಸ ನಿರ್ವಹಿಸಿದ ರೀತಿಯನ್ನು ಗಮನಿಸಿದರೆ ಎಲ್ಲ ತಪ್ಪೂ ಅರ್ಜುನನದು ಎಂಬಂತೆ ಭಾಸವಾಗುತ್ತದೆ. ಸಲಹೆ ಕೊಟ್ಟ ಕೃಷ್ಣನಿಗೂ, ಧರ್ಮರಾಯನ ಕಾಡಿನತ್ತ ಹೊರಟು ನಿಂತಾಗ ಅವನ  ತೀರ್ಮಾನವನ್ನು ನಿಯಂತ್ರಿಸಲಾಗಲಿಲ್ಲ. ಅರ್ಜುನ ಕಾಲಿಗೆ ಬಿದ್ದು ತನ್ನದು ತಪ್ಪಾಯಿತು ಎಂದ ಅನಂತರ ಧರ್ಮರಾಯ ತುಸು ಮೃದುವಾದಾಗ, ಕೃಷ್ಣ ಅರಮನೆಗೆ ಮರಳು ಎಂದು ಸೂಚಿಸುತ್ತಾನೆ.
   ಇಡೀ ಸನ್ನಿವೇಶದಲ್ಲಿ ಧರ್ಮರಾಯನ ವರ್ತನೆಯೂ ಸಂಯಮ ಮೀರಿದ್ದಾದರೂ, ಅನುಚಿತವಾಗಿದ್ದರೂ ತಪ್ಪೆಲ್ಲ ಅರ್ಜುನನದು ಎಂಬಂತೆ ಕುಮಾರವ್ಯಾಸನಲ್ಲಿ ಚಿತ್ರಿತವಾಗಿದೆ.
***
ಭಾಗ -೨
   ವ್ಯಾಸರಲ್ಲಿ ಧರ್ಮರಾಯನ ವರ್ತನೆ ಮತ್ತು ಆತ ಅರ್ಜುನನ ಮೇಲೆ ಮಾಡುವ ಆರೋಪ ತುಸು ಬೇರೆ ರೀತಿಯದು.ಅವುಗಳನ್ನು ಹೀಗೆ ಸಂಗ್ರಹಿಸಬಹುದು.
೧] ಸೂತಪುತ್ರನಾದ ಕರ್ಣನಿಂದ ತಾನು ಪರಾಜಿತನಾದದ್ದು ತನಗೆ ಅವಮಾನಕರವಾಗಿದೆ. ದ್ರೋಣ ಮತ್ತು ಭೀಷ್ಮ ಅವರು ತನ್ನನ್ನು ಈ ರೀತಿ ಅವಮಾನಿಸಿರಲಿಲ್ಲ.
೨] ಯುದ್ಧಮಾಡಲು ತಾನು ಅಶಕ್ತ ಎಂಬ ರೀತಿಯಲ್ಲಿ ಕರ್ಣ ತನ್ನ ಬಗ್ಗೆ ವರ್ತಿಸಿದ್ದು.
ಈ ಎರಡು ಮಾತುಗಳಲ್ಲಿ ವ್ಯಕ್ತವಾಗುವ ಸೂಕ್ಷ್ಮಗಳನ್ನು ಗಮನಿಸಬೇಕು. ೧] ಯುದ್ಧದಲ್ಲಿ ಸೋಲು-ಗೆಲುವು ಸಹಜ ಎಂಬುದನ್ನು ಧರ್ಮರಾಯ ಸ್ವೀಕರಿಸಿಲ್ಲ.
೨] ಸೂತನಿಂದ ತಾನು ಸೋಲಿಸಲ್ಪಟ್ಟೆ ಎಂಬ ಕೀಳರಿಮೆ ಮತ್ತು ತನ್ನನ್ನು ಅಶಕ್ತ ಎಂದು ಕರ್ಣ ಬಿಟ್ಟುಬಿಟ್ಟಿದ್ದು ತನಗಾದ ಅವಮಾನ ಎಂಬ ಭಾವನೆ.
ಧರ್ಮರಾಯ ಅರ್ಜುನನ ಬಗ್ಗೆ ಎತ್ತುವ ಆಕ್ಷೇಪಗಳು ಹೀಗಿವೆ.
೧] ನನಗೆ ವನವಾಸದ ಸಮಯದಲ್ಲಿ ಕರ್ಣನ ಬಗ್ಗೆ ತುಂಬಾ ಭಯವಿತ್ತು.ನೀನು ಯಾವಾಗಲೂ ಕರ್ಣನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಿದ್ದೆ.ನಿನ್ನ ಆ ಭರವಸೆಯನ್ನು ನಂಬಿ ನಾನು ಯುದ್ಧಕ್ಕೆ ಸಿದ್ಧನಾದೆ. ಈಗ ನೀನು ರಣರಂಗದಲ್ಲಿ ಭೀಮನನ್ನು ಬಿಟ್ಟು ಕರ್ಣನಿಗೆ ಹೆದರಿ ಬಂದೆ.
೩] ನಿನಗೆ ಸಾಮರ್ಥ್ಯವಿಲ್ಲದಿದ್ದರೆ ಕೇಶವನಿಗೆ ಗಾಂಡಿವ ಕೊಟ್ಟು ಸಾರಥಿಯಾಗು. ನಿನಗೆ, ನಿನ್ನ ಶಕ್ತಿಗೆ, ನಿನ್ನ ಧನುಸ್ಸಿಗೆ, ರಥಕ್ಕೆ ಧಿಕ್ಕಾರವಿರಲಿ.
   ಕುಮಾರವ್ಯಾಸನಲ್ಲಿ ಧರ್ಮರಾಯನ ಆಕ್ಷೇಪ ಅರ್ಜುನ ತನ್ನನ್ನು ಕಾಪಾಡಲಿಲ್ಲ ಎಂಬುದು. ವ್ಯಾಸರಲ್ಲಿ ಅರ್ಜುನ ತಾನಿತ್ತ ಭರವಸೆಯನ್ನು ಈಡೇರಿಸದ ಕಾರಣ ಈ ಸ್ಥಿತಿ ಬಂದಿದೆ ಎಂಬುದು.
೩] ವ್ಯಾಸರಲ್ಲಿ ಕೃಷ್ಣ ಧರ್ಮರಾಯನ ತಪ್ಪನ್ನೂ ಎತ್ತಿ ತೋರಿಸುತ್ತಾನೆ. ಅರ್ಜುನನ ಪ್ರತಿಜ್ಞೆ ತಿಳಿದಿದ್ದೂ ನೀನು ಗಾಂಡಿವವನ್ನು ಅವಮಾನಿಸಿದ್ದು ತಪ್ಪು ಎಂಬುದು ಅವನ ಅಭಿಪ್ರಾಯ.
೪] ಅರ್ಜುನನ ಪ್ರತಿಜ್ಞೆ ಭಂಗವಾಗಬಾರದು ಮತ್ತು ನೀನು ಹತನಾಗಬಾರದು ಎಂಬ ಉದ್ದೇಶದಿಂದ ನಾವು ಮಾಡಿದ ಈ ಕೃತ್ಯವನ್ನು ಕ್ಷಮಿಸು ಎಂದು ಕೃಷ್ಣ ಧರ್ಮರಾಯನ ಪಾದಗಳಿಗೆ ಅರ್ಜುನನ ಜೊತೆ ನಮಸ್ಕರಿಸುತ್ತಾನೆ.
೫] ಧರ್ಮರಾಯ ತಾನು ಗಾಂಡಿವವನ್ನು ಹಳಿದದ್ದು ತಪ್ಪು, ಆ ನನ್ನ ಅಪರಾಧವನ್ನು ಕ್ಷಮಿಸಿ ಎಂದು ವಿನಂತಿಸುವುದು.
***
   ಕುಮಾರವ್ಯಾಸನಲ್ಲಿ ಎಲ್ಲವೂ ಅರ್ಜುನನ ತಪ್ಪು ಎಂಬಂತೆ ಚಿತ್ರಿಸಲ್ಪಟ್ಟಿದೆ. ವ್ಯಾಸರಲ್ಲಿ ಹೀಗಿಲ್ಲ. ಧರ್ಮರಾಯ ಮತ್ತು ಕೃಷ್ಣ ಇವರೂ ಕೂಡ ತಮ್ಮ ವರ್ತನೆಗೆ ಕ್ಷಮೆ ಕೋರುವ ಮೂಲಕ ಸನ್ನಿವೇಶಕ್ಕೆ ಒಂದು ಪೂರ್ಣರೂಪದ ಚೌಕಟ್ಟನ್ನು ಹಾಕುತ್ತಾರೆ. ಕುಮಾರವ್ಯಾಸನಲ್ಲಿ ಧರ್ಮರಾಯನಿಗೆ ಕಡೆಗೂ ತನ್ನ ತಪ್ಪಿನ ಅರಿವಾಗುವುದಿಲ್ಲ ಮತ್ತು ಕೃಷ್ಣ ಅದನ್ನು ಸೂಚಿಸುವುದೂ ಇಲ್ಲ. ಸಮಸ್ಯೆಯ ಹುಟ್ಟಿಗೆ ಕಾರಣವಾದ ಧರ್ಮರಾಯ ಅದರ ಪರಿಹಾರಕ್ಕೆ ಏನೂ ಪ್ರಯತ್ನಪಡದಿರುವಂತೆ ಚಿತ್ರಣವಿದೆ. ಬಿಕ್ಕಟ್ಟನ್ನು ಬಗೆಹರಿಸಲು ಅರ್ಜುನನಿಗೆ ಇರುವ ಕಳಕಳಿಯ ಒಂದಂಶವೂ ಧರ್ಮರಾಯನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆ ಮಟ್ಟಿಗೆ ಧರ್ಮರಾಯನ ವ್ಯಕ್ತಿತ್ವ ಮುಕ್ಕಾಗುತ್ತದೆ.
***
   ಇಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳಿಕೊಳ್ಳಬಹುದು. ದ್ಯೂತದ ಸಂದರ್ಭದಲ್ಲಿ ದ್ರೌಪದಿಗೆ ಅವಮಾನವಾಗುವಾಗ ಧರ್ಮರಾಯ ತಾನೂ ಸುಮ್ಮನಿದ್ದು, ಭೀಮನನ್ನೂ ಸುಮ್ಮನಿರಿಸುತ್ತಾನೆ. (ಸಭಾಪರ್ವ,ಸಂಧಿ-೧೫,ಪದ್ಯ-೯೩). ಅರ್ಜುನನೂ ಧರ್ಮರಾಯನ ಕೈಸುಡುವ ಪ್ರಸ್ತಾಪ ಬೇಡ ಎಂದು ಸಮಾಧಾನಿಸುತ್ತಾನೆ.(ಸಭಾಪರ್ವ,ಸಂಧಿ-೧೫,ಪದ್ಯ-೯೦). ಅಲ್ಲಿ ಆಗುತ್ತಿರುವ ಅವಮಾನ ಧರ್ಮರಾಯನಿಗೂ ಅಲ್ಲ, ಅರ್ಜುನನಿಗೂ ಅಲ್ಲ. ಆದ್ದರಿಂದ ಅದನ್ನು ವೈಯಕ್ತಿಕ ನೆಲೆಯಿಂದ ದೂರವಿಟ್ಟು ಧರ್ಮದ ನೆಲೆಯಲ್ಲಿ ಗ್ರಹಿಸಲು ಇಬ್ಬರಿಗೂ ಸಾಧ್ಯವಾಗಿದೆ. ಇಲ್ಲಿ ಅವಮಾನ ತನಗೇ ಆಗಿರುವ ಕಾರಣ ಧರ್ಮರಾಯನ ವರ್ತನೆಯನ್ನು ನಿಯಂತ್ರಿಸುತ್ತಿರುವ ಸಂಗತಿ ಧರ್ಮದ ಪರಿಕಲ್ಪನೆಯಲ್ಲ, ವೈಯಕ್ತಿಕ ಅವಮಾನದ ಭಾವನೆ. ಪರರ ಬಿಕ್ಕಟ್ಟನ್ನು ಧರ್ಮದ ಮೂಲಕ ಗ್ರಹಿಸುವಷ್ಟು ಸರಳವಾಗಿ ತಮ್ಮ ಬಿಕ್ಕಟ್ಟನ್ನು ಗ್ರಹಿಸಲು ಆಗುವುದಿಲ್ಲ ಎಂಬುದಕ್ಕೆ ಈ ಪ್ರಸಂಗ  ದೃಷ್ಟಾಂತವಾಗಿದೆ. ಭೀಮ ದ್ರೌಪದಿಯ ಅವಮಾನವನ್ನು ತಮಗಾದ ಅವಮಾನ ಎಂದೇ ಆ ಸಂದರ್ಭದಲ್ಲಿ ಭಾವಿಸಿದ್ದ. ಆತನಿಗೆ ದ್ರೌಪದಿಗೆ ಆಗುತ್ತಿರುವ ಅವಮಾನವನ್ನು ನೋಡಿ ಸುಮ್ಮನಿರುವುದು ಅಧರ್ಮ ಅನಿಸಿದರೆ, ಧರ್ಮರಾಯನಿಗೆ ಧರ್ಮದ ಕಾರಣದಿಂದ ಸುಮ್ಮನಿರಲೇಬೇಕಾಗಿದೆ ಅನಿಸಿತ್ತು. ವರ್ತನೆಯಲ್ಲಿ ಕಂಡುಬರುವ ಈ ವ್ಯತ್ಯಾಸಕ್ಕೆ ಸನ್ನಿವೇಶವನ್ನು ಗ್ರಹಿಸುವ ರೀತಿ ಕಾರಣ.













Friday, October 7, 2016

ಚಕ್ರವ್ಯೂಹ.

ವ್ಯಾಸರಲ್ಲಿ:
ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ ದ್ರೋಣರು ಚಕ್ರವ್ಯೂಹವನ್ನು ರಚಿಸುತ್ತಾರೆ.ಈ ಚಕ್ರವ್ಯೂಹವನ್ನು ಭೇದಿಸುವ ತಂತ್ರವನ್ನು ಬಲ್ಲವರು ಆ ಕಾಲದಲ್ಲಿ ಕೃಷ್ಣ, ಅರ್ಜುನ,ಪ್ರದ್ಯುಮ್ನ ಮತ್ತು ಅಭಿಮನ್ಯು ಮಾತ್ರ. ಈ ನಾಲ್ವರಲ್ಲಿ ಅಭಿಮನ್ಯುವಿಗೆ ವ್ಯೂಹವನ್ನು ಪ್ರವೇಶಿಸುವ ತಂತ್ರ ಗೊತ್ತಿದೆ,ಅಲ್ಲಿಂದ ಪಾರಾಗಿ ಹೊರಬರುವ ತಂತ್ರ ತಿಳಿದಿಲ್ಲ.ಅದರ ಕಾರಣ, ಅಭಿಮನ್ಯು ಹೇಳುವ ಪ್ರಕಾರ, ಆತನಿಗೆ ಅರ್ಜುನ ಪ್ರವೇಶಿಸುವ ರೀತಿಯನ್ನು ಮಾತ್ರ ಕಲಿಸಿದ್ದು.(ಮೂಲಮಹಾಭಾರತ-ದ್ರೋಣಪರ್ವ-೩೫ನೆಯ ಅಧ್ಯಾಯ).
ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣರು ಯುದ್ಧಕ್ಕೆ ಆಹ್ವಾನಿಸುತ್ತಾರೆ.ಸಂಸಪ್ತಕರೊಡನೆ ಅರ್ಜುನ ಯುದ್ಧನಿರತನಾಗಿರುವ ಕಾರಣದಿಂದ ಧರ್ಮರಾಯ ಚಕ್ರವ್ಯೂಹವನ್ನು ಭೇದಿಸು ಎಂದು ಅಭಿಮನ್ಯುವನ್ನು ಕೇಳಿಕೊಳ್ಳುತ್ತಾನೆ. ಆತ ಅಭಿಮನ್ಯುವಿಗೆ ಹೇಳುವ ಮಾತು: “ಈ ವ್ಯೂಹವನ್ನು ಭೇದಿಸಿ ನೀವು ಪಾಂಡವಸೇನೆಯನ್ನು ನಾಶ ಮಾಡುತ್ತಿದ್ದ ದ್ರೋಣರನ್ನು ತಡೆಯಲಿಲ್ಲ ಎಂದು ಅರ್ಜುನ ವಾಪಸಾದ ಅನಂತರ ದೂಷಿಸಬಾರದು. ನಮಗ್ಯಾರಿಗೂ ಈ ವ್ಯೂಹವನ್ನು ಭೇದಿಸುವ ತಂತ್ರ ತಿಳಿದಿಲ್ಲ. ಆದ್ದರಿಂದ ನೀನು ಈ ದಿನ ಆ ವ್ಯೂಹವನ್ನು ಭೇದಿಸಬೇಕು.”
ತಾನು ಆ ವ್ಯೂಹವನ್ನು ಭೇದಿಸಬಲ್ಲೆ. ಚಕ್ರವ್ಯೂಹದ ಒಳಹೊಗುವ ತಂತ್ರವನ್ನು ತನ್ನ ತಂದೆ ಕಲಿಸಿದ್ದಾನೆ.ಆದರೆ ಅಲ್ಲಿ ಆಪತ್ತಿಗೆ ಸಿಲುಕಿದರೆ ಹೊರಬರುವ ತಂತ್ರ ನನಗೆ ಗೊತ್ತಿಲ್ಲವಾದುದರಿಂದ ಹೊರಬರುವುದು ನನಗೆ ಅಸಾಧ್ಯ ಎಂದು ಅಭಿಮನ್ಯು ಹೇಳುತ್ತಾನೆ. ಅವನು ಒಳಹೋಗಲು ಹಿಂಜರಿಕೆ ತೋರದಿದ್ದರೂ ಮುಂದಿನ ಅಪಾಯವನ್ನು ಸೂಕ್ಷ್ಮವಾಗಿ ಧರ್ಮರಾಯನಿಗೆ ಸೂಚಿಸುತ್ತಿದ್ದಾನೆ.
ಅದಕ್ಕೆ ಧರ್ಮರಾಯ ಸಮಾಧಾನ ನೀಡುತ್ತಾನೆ. “ನೀನು ಅದನ್ನು ಭೇದಿಸಿದಾಗ ನಿನ್ನ ಹಿಂದೆ ನಾವೂ ಬರುತ್ತೇವೆ.ಹಾಗೆ ಬಂದು ವ್ಯೂಹವನ್ನು ದ್ವಂಸಮಾಡುತ್ತೇವೆ.”ಭೀಮನೂ ಈ ಮಾತನ್ನು ಅನುಮೋದಿಸುತ್ತಾನೆ.
ಹಾಗೆ ಧರ್ಮರಾಯನಂದರೂ ಅಭಿಮನ್ಯುವಿಗೆ ಅವರು ತನ್ನ ಜೊತೆ ಪ್ರವೇಶಿಸಿಯಾರು ಎಂಬ ನಂಬಿಕೆ ಇಲ್ಲ. “ಕೋಪಗೊಂಡ ಪತಂಗ ಬೆಂಕಿಯತ್ತ ನುಗ್ಗುವಂತೆ ನಾನು ನುಗ್ಗುತ್ತೇನೆ” ಎಂಬ ಮಾತನ್ನಾಡುತ್ತಾನೆ. ಈ ಮಾತಲ್ಲಿ ತಾನು ಬದುಕುವುದಿಲ್ಲ ಎಂಬ ಅರ್ಥವನ್ನು ಆತ ಧ್ವನಿಸುತ್ತಾನೆ.ಆದರೆ ಧರ್ಮರಾಯ ಈ ಧ್ವನಿಯನ್ನು ಗ್ರಹಿಸುವುದಿಲ್ಲ ಅಥವ ಗ್ರಹಿಸಿದರೂ, ಆ ಸನ್ನಿವೇಶ ನಿರ್ಮಿಸಿದ್ದ ಅನಿವಾರ್ಯತೆಯಿಂದಾಗಿ ಅವನ ಅಭಿಪ್ರಾಯವನ್ನು ಕಡೆಗಣಿಸುತ್ತಾನೆ.ಯುದ್ಧಕ್ಕೆ ತೆರಳಲು ಅನುಮತಿ ನೀಡುತ್ತಾನೆ.
ಚಕ್ರವ್ಯೂಹದತ್ತ ರಥ ನಡೆಸು ಎಂದು ಸಾರಥಿಗೆ ಅಭಿಮನ್ಯು ಅದೇಶಿಸುತ್ತಾನೆ.ಸಾರಥಿ ವ್ಯಾವಹಾರಿಕವಾದ ಎರಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ.೧) ಅಸ್ತ್ರವಿದ್ಯೆಯಲ್ಲಿ ಶ್ರೇಷ್ಠರಾದ ದ್ರೋಣರ ಜೊತೆ ಯುದ್ಧಮಾಡುವುದರ ಬಗ್ಗೆ ಇನ್ನೊಮ್ಮೆ ವಿಚಾರಮಾಡು.೨) ನಿನಗೆ ಯುದ್ಧರಂಗದ ಅನುಭವ ಇಲ್ಲ.
“ದ್ರೋಣರು ತಮಗೆ ಸಮನಲ್ಲ, ಅಷ್ಟೇಕೆ ಇಂದ್ರ,ರುದ್ರ,ಶ್ರೀಕೃಷ್ಣ ಅಥವ ಅರ್ಜುನ ಯುದ್ಧಕ್ಕೆ ಬಂದರೂ ಮಣಿಸುತ್ತೇನೆ.ನೀನು ರಥ ಹರಿಸು” ಎಂದು ಮತ್ತೆ ಅದೇಶಿಸಿದಾಗ ಮನಸ್ಸಿಲ್ಲದಿದ್ದರೂ ಸಾರಥಿ ವ್ಯೂಹದತ್ತ ಒಯ್ಯುತ್ತಾನೆ.ಅಭಿಮನ್ಯು ಒಳಪ್ರವೇಶಿಸುತ್ತಾನೆ.ಆದರೆ ಪಾಂಡವಸೇನೆಯ ಉಳಿದ ಯಾರಿಗೂ ಅದನ್ನು ಪ್ರವೇಶಿಸಲು ಆಗುವುದಿಲ್ಲ.ಅಭಿಮನ್ಯು ಒಂಟಿಯಾಗುತ್ತಾನೆ.
ಕುಮಾರವ್ಯಾಸನಲ್ಲಿ:
(ದ್ರೋಣಪರ್ವ-ಸಂಧಿ ೪ )
೧]ಅರ್ಜುನನನ್ನು ಏಕಕಾಲಕ್ಕೆ ಸಮಸಪ್ತಕರು ಮತ್ತು ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣ ಇಬ್ಬರೂ ಯುದ್ಧಕ್ಕೆ ಆಹ್ವಾನಿಸುತ್ತಾರೆ.ಅರ್ಜುನ ನಾನು ಯಾರ ಜತೆ ಯುದ್ಧ ಮಾಡಲಿ ಎಂದು ಕೃಷ್ಣನನ್ನು ಕೇಳುತ್ತಾನೆ.ನಿನ್ನ ಮಗ ದ್ರೋಣರನ್ನೆದುರಿಸುತ್ತಾನೆ,ನೀನು ಸಮಸಪ್ತಕರನ್ನೆದುರಿಸು ಎಂಬ ಸಲಹೆಯನ್ನು ಕೃಷ್ಣ ನೀಡುತ್ತಾನೆ. ಹೀಗೆ ಸಲಹೆ ನೀಡಲು ಕೃಷ್ಣನಿಗೆ ಕಾರಣವಿದೆ.
ಅಳಿಯನೀ ಮೋಹರದೊಳಗಲ್ಲದೆ ಫಲುಗುಣನ ಮಗನಿವನು ಬಲುಗೈಯುಳುಹಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ…(-೨೭)
ಮಹಾಬಲಶಾಲಿಯಾದ ಅಭಿಮನ್ಯು ಈ ಯುದ್ಧದಲ್ಲಿ ಅಳಿಯಬೇಕು. ಅಭಿಮನ್ಯು ಬದುಕಿದರೆ ಕಲಿಯುಗ ಪ್ರಾರಂಭವಾಗುವುದಿಲ್ಲ.(ಯಾಕೆ ಪ್ರಾರಂಭವಾಗುವುದಿಲ್ಲ ಎಂಬುದು ಗೊತ್ತಿಲ್ಲ).ಅಭಿಮನ್ಯುವಿನ ಸಾವನ್ನು ಇಲ್ಲಿ ಕೃಷ್ಣ ನಿಶ್ಚೈಸುತ್ತಾನೆ.
೨] ಭೀಮನನ್ನೂ ಸೇರಿದಂತೆ ಪಾಂಡವಸೇನೆಗೆ ವ್ಯೂಹಭೇದನ ಅಸಾಧ್ಯವಾಗುತ್ತದೆ.(ಕಾದಲೆನ್ನಳವಲ್ಲ ಬಲ ದುರ್ಭೇದವಿದು ಶಿವಶಿವಯೆನುತ್ತ ವೃಕೋದರನು ಮರಳಿದನು...ಸಂ-೪,ಪ-೩೨.) ಚಕ್ರವ್ಯೂಹವನ್ನು ಹೇಗೆ ಭೇದಿಸುವುದು ಎಂಬ ಚಿಂತೆಯಲ್ಲಿರುವ ಧರ್ಮರಾಯನನ್ನು ಕಂಡ ಅಭಿಮನ್ಯು ತನಗೆ ಅಪ್ಪಣೆ ಕೊಡು ಎಂದು ಕೇಳುತ್ತಾನೆ.ಬಾಲಕನಾದ ಅವನನ್ನು ಕಳಿಸಲು ಧರ್ಮರಾಯನ ಮನಸ್ಸು ಒಪ್ಪುವುದಿಲ್ಲ. ವ್ಯೂಹಭೇದನದಲ್ಲಿ ಎದುರಾಗುವ ಕಷ್ಟವನ್ನು ವಿವರಿಸುತ್ತಾನೆ.ಆದರೆ ಅಭಿಮನ್ಯು ತನ್ನ ಪೌರುಷಕ್ಕೆ ಅದು ಸಮವಲ್ಲ ಎಂದು ಸಾಧಿಸಿದಾಗ ಧರ್ಮರಾಯ ಒಪ್ಪುತ್ತಾನೆ.ತಾವು ಅವನನ್ನು ಹಿಂಬಾಲಿಸುವ ಭರವಸೆ ನೀಡುತ್ತಾನೆ.ಇಲ್ಲಿಯೂ ಸಾರಥಿಯ ಸಂದೇಹವನ್ನು ತಳ್ಳಿಹಾಕಿದ ಅಭಿಮನ್ಯು ವ್ಯೂಹವನ್ನು ಪ್ರವೇಶಿಸುತ್ತಾನೆ.ಉಳಿದವರಿಗೆ ಪ್ರವೇಶಿಸಲು ಆಗದೆ ಅಭಿಮನ್ಯು ಒಂಟಿಯಾಗುತ್ತಾನೆ.
ಮೂಲದಲ್ಲಿ ಕೃಷ್ಣನ ತಂತ್ರದ ಸೂಚನೆ ಇಲ್ಲ.ಇದನ್ನು ಕುಮಾರವ್ಯಾಸ ಯಾಕೆ ತಂದ ಎಂಬುದು ತಿಳಿಯುವುದಿಲ್ಲ.ಅದರಿಂದ ಕಾವ್ಯದ ಅರ್ಥವ್ಯಾಪ್ತಿಯ ವಿಸ್ತಾರವಂತೂ ಆಗಿಲ್ಲ.ಮಹಾಭಾರತದ ಎಲ್ಲ ಮುಖ್ಯ ಘಟನೆಗಳಲ್ಲೂ ಕೃಷ್ಣನ ಕೈವಾಡವಿದೆ ಎಂಬುದನ್ನು ತೋರಿಸಲು ತಂದಿರಬಹುದು ಎಂದು ಊಹಿಸಬಹುದು.
ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ್ದಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳುತ್ತಾನೆ.ತಾವು ಉಳಿದ ಸೇನೆಯ ಜತೆ ಅವನನ್ನು ಹಿಂಬಾಲಿಸಿ ಕಾಪಾಡುತ್ತೇವೆ ಎಂಬ ಭರವಸೆಯನ್ನು ಧರ್ಮರಾಯ ಮತ್ತು ಭೀಮ ನೀಡುತ್ತಾರೆ. ಮೂಲದಲ್ಲಿ ಅಭಿಮನ್ಯುವಿನ  ಈ ವ್ಯಾವಹಾರಿಕ ಎಚ್ಚರ,ಅವನ ಪೌರುಷದ ಜೊತೆಗೇ ನಿರೂಪಿತವಾಗಿದೆ.
ಕುಮಾರವ್ಯಾಸನಲ್ಲಿ ತನ್ನ ವೀರತ್ವವನ್ನು ಘೋಷಿಸಿ ಅಭಿಮನ್ಯುವೇ ಧರ್ಮರಾಯನನ್ನು ವಿನಂತಿಸುತ್ತಾನೆ. ಮೊದಲಿಗೆ ಧರ್ಮರಾಯ ವಿರೋಧಿಸಿದರೂ ಅಭಿಮನ್ಯುವಿನ ಒತ್ತಾಯಕ್ಕೆ ಒಪ್ಪುತ್ತಾನೆ.ಮೂಲಕ್ಕಿಂತ ಹೆಚ್ಚಿನ ವಿವರದಲ್ಲಿ ಅಭಿಮನ್ಯುವಿನ ಶೌರ್ಯ ಚಿತ್ರಿತವಾಗಿದ್ದರೂ, ಮೂಲದಲ್ಲಿ ವ್ಯಕ್ತವಾಗುವ ವ್ಯಾವಹಾರಿಕ ಎಚ್ಚರ ಇಲ್ಲಿ ಕಂಡು ಬರುವುದಿಲ್ಲ. ಆ ಎಚ್ಚರ ಧರ್ಮರಾಯನಲ್ಲಿ ಇದೆ. ಆದರೆ ಅಷ್ಟೆಲ್ಲ ವಿರೋಧಿಸಿದ ಧರ್ಮರಾಯ ಕೊನೆಗೆ ಒಪ್ಪಲು ಏನು ಕಾರಣ ಎಂಬುದು ತಿಳಿಯುವುದಿಲ್ಲ.ವ್ಯೂಹಭೇದನ ಅನಿವಾರ್ಯವಾಗಿತ್ತು ಎಂಬುದು ಆತ ಒಪ್ಪಲು ಕಾರಣವಾದರೆ ಆ ಅನಿವಾರ್ಯತೆ ಅಭಿಮನ್ಯುವನ್ನು ಮೊದಲು ವಿರೋಧಿಸುವಾಗಲೂ ಇತ್ತು.
      ಮೊದಲು ಒಪ್ಪದ, ಅನಂತರ ಒಪ್ಪುವ ಧರ್ಮರಾಯನ ವರ್ತನೆಯ ನಡುವೆ ಅವನ ಅಭಿಪ್ರಾಯ ಬದಲಾಗಲು ಯಾವುದು ಕಾರಣ ಎಂಬ ಅಂಶ ಕುಮಾರವ್ಯಾಸನಲ್ಲಿ ಸ್ಪಷ್ಟವಾಗಿಲ್ಲ.ಈ ರೀತಿಯ ಗೊಂದಲ ಮೂಲದಲ್ಲಿ ಇಲ್ಲ.ಅಲ್ಲಿ ಧರ್ಮರಾಯ ವಿನಂತಿಸುತ್ತಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳಿ,ತನಗೊದಗಬಹುದಾದ ಆಪತ್ತಿನ ಬಗ್ಗೆ ಹೇಳಿದಾಗ ಧರ್ಮರಾಯ ಮತ್ತು ಭೀಮ ತಾವು ಬೆಂಬಲಕ್ಕೆ ಬರುವ ಭರವಸೆ ನೀಡುತ್ತಾರೆ.ಅಂದರೆ ಮೂಲದಲ್ಲಿ ಅಭಿಮನ್ಯುವಿಗೆ ತನ್ನ ಶಕ್ತಿ ಮತ್ತು ಮಿತಿ ಎರಡರ ಬಗ್ಗೆಯೂ ತಿಳಿವಳಿಕೆ ಇದೆ.ಹಾಗಾಗಿಯೇ ಧರ್ಮರಾಯ,ಭೀಮ ಇಬ್ಬರೂ ಬೆಂಬಲಿಸುವ ಭರವಸೆ ನೀಡಿದ ಅನಂತರ ವ್ಯೂಹಭೇದನಕ್ಕೆ ಒಪ್ಪುತ್ತಾನೆ.ಕುಮಾರವ್ಯಾಸನ ಅಭಿಮನ್ಯು ಅದರ ಅಗತ್ಯವೇ ಇಲ್ಲ ಎಂಬಂತೆ ಮಾತಾಡಿದ್ದಾನೆ.ಅಭಿಮನ್ಯು ವ್ಯಾಸರಲ್ಲಿ ವೀರ ಮತ್ತು ವಿವೇಕಿ ಎಂಬಂತೆ ಚಿತ್ರಿತವಾಗಿದ್ದರೆ ಕುಮಾರವ್ಯಾಸನಲ್ಲಿ ವೀರ ಎಂಬಂತೆ ಮಾತ್ರ ಚಿತ್ರಿತವಾಗಿದೆ.ಕುಮಾರವ್ಯಾಸನ ಅಭಿಮನ್ಯು ಒಂದು ಮಗ್ಗುಲನ್ನು ಕಳೆದುಕೊಂಡಿದ್ದಾನೆ.
ಇನ್ನೊಂದು ಅಂಶವನ್ನೂ ಗಮನಿಸಬಹುದು. ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ ಕಾರಣ ಅವನ ಮರಣದ ಜವಾಬ್ದಾರಿಯನ್ನು ಧರ್ಮರಾಯ ಹೊರಬೇಕಾಗಿದೆ. ಕುಮಾರವ್ಯಾಸನಲ್ಲಿ ಅಭಿಮನ್ಯುವೇ ತನ್ನ ಮರಣಕ್ಕೆ ಜವಾಬ್ದಾರನಾಗುತ್ತಾನೆ.ಹಾಗಾಗಿ ವ್ಯಾಸರಲ್ಲಿ ಧರ್ಮರಾಯನನ್ನು ಕಾಡುವಪಾಪಪ್ರಜ್ಞೆಕುಮಾರವ್ಯಾಸನಲ್ಲಿ ಕಾಡಬೇಕಿಲ್ಲ.
ವ್ಯಾಸರಲ್ಲಿ ಚಕ್ರವ್ಯೂಹದೊಳಗೆ..
೧] ಅಭಿಮನ್ಯುವಿನ ಯುದ್ಧದ ಬಿರುಸಿನಿಂದ ಎಲ್ಲರೂ ಬಸವಳಿದಾಗ ಕರ್ಣ ದ್ರೋಣರ ಬಳಿ ಹೋಗಿ ತನಗೆ ಇವನ ಜೊತೆ ಯುದ್ಧ ಮಾಡಲು ಆಗುತ್ತಿಲ್ಲ, ಇವನನ್ನು ನಿಯಂತ್ರಿಸುವುದು ಹೇಗೆ ಎಂದು ಕೇಳುತ್ತಾನೆ. ಕೈಯಲ್ಲಿ ಬಿಲ್ಲು ಇರುವವರೆಗೆ ಅವನನ್ನು ನಿಯಂತ್ರಿಸಲು ಆಗದು.ಸಾಧ್ಯವಾದರೆ ಬಿಲ್ಲನ್ನು ಕತ್ತರಿಸು.ಬೇಕಿದ್ದರೆ ಹಿಂದಿನಿಂದ ಅವನ ಮೇಲೆ ದಾಳಿ ಮಾಡು ಎಂದು ದ್ರೋಣರು ಅನ್ನುತ್ತಾರೆ. ಕುಮಾರವ್ಯಾಸಲ್ಲಿ ಇರುವಂತೆ ನಾವೆಲ್ಲಾ ಸೇರಿ ಅವನ ಮೇಲೆ ಒಟ್ಟಿಗೇ ಯುದ್ಧ ಮಾಡುವ ಎಂದು ದ್ರೋಣರು ಹೇಳಿಲ್ಲ.ಕರ್ಣ ಬಿಲ್ಲನ್ನು ಕತ್ತರಿಸುತ್ತಾನೆ. ಆದರೆ ಆತ ಹಿಂದಿನಿಂದ ಕತ್ತರಿಸಿದ ಎಂಬ ಸೂಚನೆ ವ್ಯಾಸರಲ್ಲಿ ಇಲ್ಲ.ಆದ್ದರಿಂದ ಕರ್ಣ ಎದುರಿಗೆ ನಿಂತೇ ಬಿಲ್ಲು ಕತ್ತರಿಸಿದ್ದಾನೆ ಎಂದು ಭಾವಿಸಬೇಕಾಗುತ್ತದೆ.
(ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಗಮನಿಸಬಹುದು.೧] ಅಭಿಮನ್ಯು ’ಹಿಂದಿನಿಂದ ಕತ್ತರಿಸಿದೆಯಲ್ಲ ಕರ್ಣ’  ಎಂಬ ಮಾತನ್ನು ಆಡಿಲ್ಲ.೨] ಕರ್ಣವಧೆಯ ಸಂದರ್ಭದಲ್ಲಿ, ಕರ್ಣ ಮಾಡಿದ ಅನ್ಯಾಯವನ್ನು ಪಟ್ಟಿ ಮಾಡುವಾಗ ಹಿಂದಿನಿಂದ ಬಿಲ್ಲು ಕತ್ತರಿಸಿದೆ ಎಂದು ಕೃಷ್ಣ ಆಪಾದಿಸಿಲ್ಲ,ಬದಲಿಗೆ ನೀವು ಆರು ಜನ ಒಬ್ಬನನ್ನು ಕೊಂದದ್ದು ಧರ್ಮವೇ ಎಂದು ಕೇಳುತ್ತಾನೆ.
ಯದಾಭಿಮನ್ಯುಂ ಬಹವೋ ಯುದ್ಧೇ ಜಘ್ನುರ್ಮಹಾರಥಾಃ|
ಪರಿವಾರ್ಯ ರಣೇ ಬಾಲಂ ಕ್ವ ತೇ ಧರ್ಮಸ್ತದಾ ಗತಃ || ಕ.ಪ-ಅಧ್ಯಾಯ ೧೯,ಶ್ಲೋ-೧೧. ಯುದ್ಧದಲ್ಲಿ ಏಕಾಕಿಯಾಗಿದ್ದ ಬಾಲನಾದ ಅಭಿಮನ್ಯುವನ್ನು ಅನೇಕ ಮಹಾರಥರು ಸುತ್ತುವರಿದು ಸಂಹಾರಮಾಡಿದರು.ಆ ಸಮಯದಲ್ಲಿ ನಿನ್ನ ಧರ್ಮವು ಎಲ್ಲಿ ಹೋಗಿತ್ತು?)
೩] ಕರ್ಣ ಅಭಿಮನ್ಯುವಿನ ಕೈಯನ್ನು ಕತ್ತರಿಸುವುದು ವ್ಯಾಸರಲ್ಲಿ ಇಲ್ಲ.ಇದು ವಾಸ್ತವಿಕವಾದ ಚಿತ್ರಣ ಅನಿಸುತ್ತದೆ. ಕೈ ಇಲ್ಲದ ಅಭಿಮನ್ಯು ರಥದ ಚಕ್ರ ಹಿಡಿದು ಯುದ್ಧ ಮಾಡುವುದು ಅವಾಸ್ತವಿಕ ಅನಿಸುತ್ತದೆ. ವ್ಯಾಸರಲ್ಲಿ ಕೊನೆಗೆ ಅಭಿಮನ್ಯು ಮತ್ತು ದುಶ್ಯಾಸನನ ಮಗ ಗದಾಯುದ್ಧ ಮಾಡುತ್ತಾರೆ.ಇಬ್ಬರೂ ಪೆಟ್ಟಾಗಿ ನೆಲಕ್ಕುರುಳುತ್ತಾರೆ. ದುಶ್ಯಾಸನನ ಮಗ ಅಭಿಮನ್ಯುವಿಗಿಂತ ಮೊದಲು ಮೇಲೆದ್ದು ಅಭಿಮನ್ಯುವಿನ ತಲೆಗೆ ಗದೆಯಿಂದ ಪೆಟ್ಟು ಕೊಡುತ್ತಾನೆ.ಅಭಿಮನ್ಯು ಸಾಯುತ್ತಾನೆ. (ದುಶ್ಯಾಸನನ ಮಗನೂ ಸತ್ತದ್ದು ವ್ಯಾಸರಲ್ಲಿ ಇಲ್ಲ.)ಈ ವಿವರಣೆ ಸಹಜವಾಗಿದೆ.ಕುಮಾರವ್ಯಾಸನ ಚಿತ್ರಣದಂತೆ ಅತಿ ರಂಜಿತವಾಗಿಲ್ಲ.

ಕುಮಾರವ್ಯಾಸನಲ್ಲಿ ಚಕ್ರವ್ಯೂಹದೊಳಗೆ....
ಒಳಹೊಕ್ಕ ಅಭಿಮನ್ಯು ಭೀಕರವಾಗಿ ಯುದ್ಧಮಾಡಿ ಕೌರವ ಪಕ್ಷದ ಎಲ್ಲ ಅತಿರಥ,ಮಹಾರಥರನ್ನು ಸೋಲಿಸುತ್ತಾನೆ.ದ್ರೋಣ, ಶಲ್ಯ,ಕರ್ಣ,ಅಶ್ವತ್ಥಾಮ,ದುರ್ಯೋಧನ ಇತ್ಯಾದಿಯಾಗಿ ಯಾರಿಗೂ ಅವನ ಸಮನಾಗಿ ಯುದ್ಧ ಮಾಡಲು ಆಗುವುದಿಲ್ಲ.ಹತಾಶನಾದ ದುರ್ಯೋಧನ ಎಲ್ಲರನ್ನು ಹೀಯಾಳಿಸುತ್ತಾನೆ. ಆಗ ದ್ರೋಣರು ಒಬ್ಬರಿಂದ ಇವನನ್ನು ಸಂಹರಿಸಲು ಆಗುವುದಿಲ್ಲ.ನಾವು ಆರು ಜನಸೇರಿ ಏಕಕಾಲದಲ್ಲಿ ಯುದ್ಧ ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಹಾಗಿದ್ದೂ ಅಭಿಮನ್ಯುವನ್ನು ಸೋಲಿಸಲು ಆಗುವುದಿಲ್ಲ.ಆಗ ಕರ್ಣನನ್ನು ಕರೆದು ನೀನು ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸು ಎಂದು ಸೂಚಿಸುತ್ತಾರೆ.(.........ಇದಿರೊಳಾನಿಹೆ ಶಲ್ಯನೆಡವಂಕದಲಿ ಬಲದಲಿ ಕೃಪನಪರಭಾಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ||ದ್ರೋ.ಪ.ಸಂ-೬,ಪ-೨೮).ಇದು ಯುದ್ಧನೀತಿಯಲ್ಲ ಎಂಬುದು ದ್ರೋಣನಿಗೆ ಗೊತ್ತು.ಕರ್ಣನೂ ಈ ಸಲಹೆಯನ್ನು ಒಪ್ಪದಿರಬಹುದು ಎಂಬ ಅನುಮಾನವಿದೆ. ಇದು ಸ್ವಾಮಿಕಾರ್ಯ,ಕೌರವನ ಉಳಿವಿಗೆ ಅನಿವಾರ್ಯ ಎಂಬ ಮಾತನಾಡಿ ಕರ್ಣನನ್ನು ಭಾವನಾತ್ಮಕವಾಗಿ ಬಂಧಿಸುತ್ತಾನೆ.(.....ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು ರೂಪುದೋರದೆ ಬಂದು ಸುಭಟನ ಚಾಪವನು ಖಂಡಿಸುವುದಿದು ಕುರುಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ||ಪ-೨೯).
    
***
ದ್ರೋಣ ಅಪರಭಾಗದಿಂದ ಬಂದು ಬಿಲ್ಲನ್ನು ಖಂಡಿಸಲು ಕರ್ಣನನ್ನು ಆಯಲು ಈ ಕಾರಣಗಳು ಇವೆ ಎಂದು ಊಹಿಸಬಹುದು.
೧] ಕ್ಷತ್ರಿಯ ಶಲ್ಯ ಮತ್ತು ಬ್ರಾಹ್ಮಣ ಕೃಪ ದ್ರೋಣರ ಸಲಹೆಯನ್ನು ಅನೀತಿ ಎಂದು ತಿರಸ್ಕರಿಸಬಹುದು. ಉಚ್ಚಕುಲದ ಅವರಿಗೆ ನೀತಿಯಲ್ಲದ ಕೆಲಸ ಸೂಚಿಸುವುದು ಸರಿಯಲ್ಲ.  ಮತ್ತು ಅವರು ಯಾರೂ ಮನಃಪೂರ್ವಕವಾಗಿ ದುರ್ಯೋಧನನ ಪಕ್ಷದಲ್ಲಿ ಇದ್ದವರಲ್ಲ.
೨] ಸ್ವಾಮಿನಿಷ್ಠೆ ಮತ್ತು ಕೌರವನ ಉಳಿವಿನ ಬಗ್ಗೆ ಕರ್ಣನಿಗೆ ಇರುವ ಭಾವನೆ ಉಳಿದವರಿಗೆ ಇಲ್ಲ.ಅವರಿಗೆ ಇರುವುದು ಋಣಪ್ರಜ್ಞೆ ಮಾತ್ರ.ಹಾಗಾಗಿ ನಾವು ಯುದ್ಧ ಮಾಡುತ್ತೇವೆ,ಆದರೆ ನೀತಿ ರಹಿತವಾಗಿ ಅಲ್ಲ ಎಂದು ಅವರು ಹೇಳಿದರೆ ಅದನ್ನು ತಪ್ಪು ಅನ್ನುವಂತಿಲ್ಲ.ಅದಲ್ಲದೆ ಅವರನ್ನು ಸ್ವಾಮಿನಿಷ್ಠತೆಯ ಹೆಸರಲ್ಲಿ ಪ್ರೇರೇಪಿಸಲು ಆಗುವುದಿಲ್ಲ.
೩] ಕರ್ಣನ ಜಾತಿಯ ಹಿನ್ನೆಲೆಯೂ ದ್ರೋಣರ ಮನಸ್ಸಲ್ಲಿ ಇತ್ತೇ?ತಾವು ಮತ್ತು ಕೃಪ ಬ್ರಾಹ್ಮಣರು,ಶಲ್ಯ ಕ್ಷತ್ರಿಯ.ತಾವು ಅನೀತಿಯ ಮಾರ್ಗ ಅವಲಂಬಿಸುವುದು ತಪ್ಪು,ಆದರೆ ಸೂತಕುಲಜನಾದ ಕರ್ಣ ಹಾಗೆ ಮಾಡುವುದು ತಪ್ಪಲ್ಲ ಎಂಬ ಭಾವನೆಯೂ ಇರಬಹುದು.
೪] ಹಿಂದಿನಿಂದ ಬಿಲ್ಲನ್ನು ಕಾತರಿಸುವುದೂ ಕೂಡ ಸಾಮಾನ್ಯ ಯೋಧರಿಗೆ ಅಸಾಧ್ಯವಾದುದರಿಂದ ದ್ರೋಣರು ಕರ್ಣನನ್ನು ಆಯ್ಕೆ ಮಾಡಿದರು ಎಂಬ ಮಾತೂ ಇದೆ. ಇದನ್ನು ಒಪ್ಪುವುದು ಕಷ್ಟ.ಕೃಪ,ಶಲ್ಯರು ಮಹಾ ಯೋಧರೇ.ಸ್ವತಃ ದ್ರೋಣರೂ ಮಹಾ ಯೋಧರೇ. ಹಾಗಿರುವಾಗ ಕರ್ಣನ್ನು ಆಯ್ಕೆ ಮಾಡಲು ಅವನ ಕುಲವೇ ಕಾರಣವಾಗಿರಬಹುದು ಎಂಬುದು ಹೆಚ್ಚು ಸಹಜವಾಗಿದೆ.
***
ಕರ್ಣ ಹಿಂಜರಿಯುತ್ತಾನೆ. ಅವನು ಬಿಲ್ಲನ್ನು ಖಂಡಿಸುತ್ತಾನೆ ಎಂಬ ಭರವಸೆಯಿಂದ ಎದುರಾದ ಶಲ್ಯ,ಕೃಪರು ಮತ್ತೆ ಪೆಟ್ಟು ತಿಂದು ಕರ್ಣನನ್ನು ದೂಷಿಸುತ್ತಾರೆ. ಕರ್ಣನ ದ್ವಂದ್ವ ಮನಸ್ಥಿತಿ ಹಿಂಜರಿಕೆಗೆ ಕಾರಣ. ಅಭಿಮನ್ಯು ತನ್ನ ಮಗನ ಸಮಾನ ಎಂಬ ಭಾವ ಇದೆ.ಹಾಗಂತ ಈತನನ್ನು ಕೊಲ್ಲದಿದ್ದರೆ ಒಡೆಯ ಕೌರವನಿಗೆ ಉಳಿವಿಲ್ಲ.ಹಿಂದಿನಿಂದ ಬಿಲ್ಲನ್ನು ಕತ್ತರಿಸುವ ಅನೀತಿಗೆ ಕರ್ಣನ ಮನಸ್ಸು ಇಲ್ಲಿ ಅಳುಕುತ್ತಿಲ್ಲ, ಮಗ ಎಂಬ ಮಮಕಾರ ಬಲಿತರೆ ಕೌರವ ಉಳಿಯಲಾರ ಎಂಬ ಬೌದ್ಧಿಕ ತಿಳಿವಳಿಕೆಯೇ ಭಾವಕ್ಕಿಂತ ಪ್ರಬಲವಾಗಿ ಆತ ಅಪರಭಾಗದಿಂದ ಬಿಲ್ಲನ್ನು ಕತ್ತರಿಸುತ್ತಾನೆ. ಮಗನ ಉಳಿವಿಗಿಂತ ಮಿತ್ರನ ಉಳಿವಿಗೆ ಮನಸ್ಸು ಮಾಡುತ್ತಾನೆ.ಅಭಿಮನ್ಯು ಅವನನ್ನು ವ್ಯಂಗ್ಯವಾಗಿ ಚುಚ್ಚುತ್ತಾನೆ.(ಆವ ಶರಸಂಧಾನ ಲಾಘವದಾವ ಪರಿ......ಸಂ-೬,ಪ-೩೪)
ಅಭಿಮನ್ಯು ಖಡ್ಗದಿಂದ ಯುದ್ಧ ಶುರುಮಾಡುತ್ತಾನೆ.ಕರ್ಣ ಆಗ ಅವನ ಕರವೆರಡನ್ನು ಕತ್ತರಿಸುತ್ತಾನೆ. ಮೊಂಡುಕೈಯಿಂದ ಚಕ್ರವನ್ನು ಹಿಡಿದು ಅಭಿಮನ್ಯು ಯುದ್ಧವನ್ನು ಮುಂದುವರಿಸುತ್ತಾನೆ.ದುಶ್ಯಾಸನನ ಮಗ ಎದುರಾಗುತ್ತಾನೆ.ಇಬ್ಬರೂ ಯುದ್ಧದಲ್ಲಿ ಮಡಿಯುತ್ತಾರೆ.
ನೀತಿಯುದ್ಧದ ನಿಯಮ ಇಲ್ಲಿ ಮೀರಿದಂತೆ ಕುಮಾರವ್ಯಾಸ ಚಿತ್ರಿಸಿದ್ದಾನೆ.ಆರುಜನ ರಥಿಕರು ಒಬ್ಬನ ಬಳಿ ಯುದ್ಧ ಮಾಡುವುದು,ಕರ್ಣ ಹಿಂದಿನಿಂದ ಬಾಣ ಬಿಡುವುದು ಇವು ನಿಯಮಗಳಲ್ಲ.ಅಭಿಮನ್ಯುವಿನ ವೀರತ್ವವನ್ನು ಅತಿಕರಿಸುವ ಉತ್ಸಾಹದಲ್ಲಿ ಕುಮಾರವ್ಯಾಸ ಕರ್ಣನ ಘನತೆಯನ್ನು ಕುಗ್ಗಿಸಿದ್ದಾನೆ. ಈ ಮಾತು ವ್ಯಾಸರು ಚಿತ್ರಿಸಿದ ರೀತಿಯನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ.
***
***
ಕುಮಾರವ್ಯಾಸ ಅಭಿಮನ್ಯುವಿನ ವೀರತ್ವ ಚಿತ್ರಿಸುತ್ತಾನೆ,ಅವನ ವಿವೇಕವನ್ನು ಚಿತ್ರಿಸಿಲ್ಲ. ಅವನ ವೀರತ್ವ ಚಿತ್ರಿಸುವಾಗ ತನ್ನನ್ನು ತಾನೇ ಮರೆತಂತೆ ತೋರುತ್ತದೆ.ವ್ಯಾಸರು ಆ ರೀತಿಯಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ.ಅವರ ಅಭಿಮನ್ಯು ವೀರ ಮತ್ತು ವಿವೇಕಿ.ವ್ಯಾಸರಲ್ಲಿ ಅಭಿಮನ್ಯುವಿನ ಸಾವಲ್ಲಿ ಧರ್ಮರಾಯ ಮತ್ತು ಭೀಮರ ಪಾಲೂ ಇದೆ. ಕುಮಾರವ್ಯಾಸನಲ್ಲಿ ಅಭಿಮನ್ಯು ತನ್ನ ಸಾವಿಗೆ ತಾನೇ ಜವಾಬ್ದಾರ.
***
ಇಲ್ಲಿ ವ್ಯಾಸರ ಚಿತ್ರಣವನ್ನು ವಿವರಿಸಲು ಭಾರತ ದರ್ಶನ ಮುದ್ರಣಾಲಯದವರ ಅನುವಾದವನ್ನು ಆಧರಿಸಲಾಗಿದೆ.
ದ್ರೋಣ ಪರ್ವ,೩೩ ನೆಯ ಅಧ್ಯಾಯದಿಂದ ೪೯ನೆಯ ಅಧ್ಯಾಯದವರೆಗೆ.

Wednesday, August 31, 2016

ಒಂದು ಪದ್ಯ.


ಕುಮಾರವ್ಯಾಸ ಮಹಾಕವಿ ರೂಪಕ ಚಕ್ರವರ್ತಿ.ರೂಪಕ,ಹೋಲಿಕೆಗಳ ಮೂಲಕ ಕಾವ್ಯವನ್ನು ಕಟ್ಟುವ ಅವನ ಸಾಮರ್ಥ್ಯ ಬೆರಗು ಹುಟ್ಟಿಸುತ್ತದೆ.ಕವಿಯೊಬ್ಬನ ಕಾವ್ಯಶಕ್ತಿಯನ್ನು ರೂಪಕ ನಿರ್ಮಾಣದಲ್ಲಿ ಮಾತ್ರ ಅಳೆಯದೆ ರೂಪಕರಹಿತವಾದ,ಹೋಲಿಕೆರಹಿತವಾದ ಚಿತ್ರಣಗಳಲ್ಲೂ ಗಮನಿಸಬೇಕು.ಅಲ್ಲಿ ಯಶಸ್ವಿಯಾಗುವ ಕವಿಯದು ನಿಜವಾದ ಸಾಧನೆ.
ಅಂತಹ ಒಂದು ಪದ್ಯದ ವಿಶ್ಲೇಷಣೆ ಈ ಲೇಖನದ ಆಶಯ.
ದ್ರೋಣ ಪರ್ವ,ಸಂಧಿ ೧೮,ಪದ್ಯ ೩೫
ಮುಂದೆಹೋಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನುನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ
ದ್ರೋಣಪರ್ವದ ಕೊನೆಯ ದಿನದ ಯುದ್ಧದಲ್ಲಿ ಭೀಮಾರ್ಜುನಸಹಿತ ಪಾಂಡವಸೇನೆ ದ್ರೋಣರನ್ನು ಮುತ್ತಿದಾಗ, ದ್ರೋಣರು ಮಾಡಿದ ಯುದ್ಧದ ಪರಿಣಾಮ ಇಲ್ಲಿ ಚಿತ್ರಿತವಾಗಿದೆ.
ಮುಂದೆಹೋಗುವತಿಬಳರು ಹಾರಿತು ಹಿಂದಣವರನು:ಎಲ್ಲರಿಗಿಂತ ಮುಂದೆ ಇದ್ದ ಯೋಧರು ದ್ರೋಣರ ಬಾಣದ ಘಾತದಿಂದ ಪಾರಾಗಲು ಅವರ ಹಿಂದೆ ಬರುತ್ತಿದ್ದವರ ಹಿಂದೆ ಹಾರಿದರು. ಹಾರಿದರು ಎಂಬ ಪದಪ್ರಯೋಗವನ್ನು ಗಮನಿಸಬೇಕು.ಅವರು ನಡೆದು ಅಥವ ಓಡಿ ಹಿಂದಾಗಲಿಲ್ಲ.ಅದಕ್ಕೆ ಅವಕಾಶವಿರಲಿಲ್ಲ.ಆದ್ದರಿಂದ ಹಾರಿ ಹಿಂದೆ ನಿಂತರು.
ಹಿಂದೆ ನಿಲುವರು ಮುಂದಣವರಾಸೆಯಲಿ:ಇಲ್ಲಿಯವರೆಗೂ ಹಿಂದೆ ಇದ್ದವರು ಈಗ ನೋಡಿದರೆ ದ್ರೋಣರ ಎದುರೇ ಬಂದುಬಿಟ್ಟಿದ್ದಾರೆ.ಹಾಗೆ ಮುಂದಾದವರು ಭಯಪಟ್ಟು ತಾವು ಹಿಂದೆ ಹೋದರೆ ಉಳಿಯಬಹುದು ಎಂಬಾಸೆಯಿಂದ ತಮ್ಮ ಹಿಂದೆ ಇದ್ದವರ ಹಿಂದೆ ಹೋಗಿ ನಿಂತರು.
ನಿಂದುದು ಪಾರ್ಥಪರಿಯಂತ: ಹೀಗೆ ಹಿಂದೆ ಹಿಂದೆ ಹೋಗುತ್ತ ಪಾರ್ಥ ನಿಂತಲ್ಲಿಯವರೆಗೂ ಹೋಗಿ,ಅವನ ಹಿಂದೆ ನಿಂತರು.ಹೀಗೆ ಇಡೀ ಸೈನ್ಯ ಪಾರ್ಥನ ಹಿಂದೆ ಅವನ ರಕ್ಷಣೆಯನ್ನು ನಿರೀಕ್ಷಿಸಿ ನಿಂತಿತು.ಆದರೆ...
ಅಂದು ಪಾರ್ಥನು ಕೃಷ್ಣಬಲದಲಿ ನಿಂದನು: ಅವತ್ತು ಪಾರ್ಥನು ಕೃಷ್ಣನ ಬಲವಿರುವ ಕಾರಣದಿಂದ ಅಲ್ಲಿ ನಿಂತನು.ಪಾರ್ಥನೂ ಕೂಡ ದ್ರೋಣರರೆದುರು ನಿಂತಿದ್ದು ಕೃಷ್ಣನ ಬಲದಿಂದ.ಇಲ್ಲವಾದರೆ ಅವನಿಗೂ ನಿಲ್ಲಲು ಆಗುತ್ತಿರಲಿಲ್ಲ.
ಈ ಪದ್ಯದ ಸೂಕ್ಷ್ಮವಾದ ಧ್ವನಿಯನ್ನು ಗುರುತಿಸಬೇಕು.ಪಾಂಡವ ಸೇನೆಯ ಯೋಧರಿಗೆ ಅರ್ಜುನ ತಮಗೆ ಆಶ್ರಯ ನೀಡಬಲ್ಲವ ಎಂಬ ನಂಬಿಕೆ ಇದೆ. ಅದರೆ ಅರ್ಜುನನಿಗೆ ಆ ಶಕ್ತಿ ಇರುವುದು ಕೃಷ್ಣನ ಅಭಯ,ರಕ್ಷಣೆ ಇರುವುದರಿಂದ. ಶಸ್ತ್ರಧಾರಿಗಳಾದವರು ಶಸ್ತ್ರಧಾರಿಯಾದವನ ಎದುರು ನಿಲ್ಲಲಾರದೆ,ಶಸ್ತ್ರವನ್ನು ಹಿಡಿಯದವನ ರಕ್ಷಣೆಯಲ್ಲಿ ನಿಲ್ಲುತ್ತಿದ್ದಾರೆ ಎಂಬುದನ್ನು ಚಿತ್ರಿಸುವ ಮೂಲಕ,ಕುಮಾರವ್ಯಾಸ ಕೃಷ್ಣನ ಸಾಮರ್ಥ್ಯವನ್ನು,ಯುದ್ಧರಂಗದಲ್ಲಿ ನಡೆದ ಸಹಜವಾದ ಒಂದು ಕ್ರಿಯೆಯ ವರ್ಣನೆಯ ಮೂಲಕ ಧ್ವನಿಸುತ್ತಿದ್ದಾನೆ.ಜೊತೆಗೆ ದ್ರೋಣನ ಅವತ್ತಿನ ಶೌರ್ಯ, ಅರ್ಜುನನನ್ನೂ ಸೇರಿದಂತೆ ಪಾಂಡವಸೈನ್ಯದ ಭೀತಿ, ಮತ್ತು ಅರ್ಜುನ ಸಹಿತ ಪಾಂಡವಸೇನೆಗಿರುವ ಕೃಷ್ಣನ ರಕ್ಷಣೆ ಈ ಮೂರೂ ಅಂಶಗಳು ಇಲ್ಲಿ  ವ್ಯಕ್ತವಾಗಿವೆ.ಇಲ್ಲಿ ಕುಮಾರವ್ಯಾಸ ತನ್ನ ಪ್ರಬಲ ಅಸ್ತ್ರವಾದ ರೂಪಕವನ್ನು ಬಳಸಿಲ್ಲ ಎಂಬುದೂ ಗಮನಾರ್ಹ.ಒಂದೂ ರೂಪಕ ಬಳಸದೆ ಆತ ಹುಟ್ಟಿಸುವ ಧ್ವನಿಶಕ್ತಿ ಅಪೂರ್ವವಾದದ್ದು.  

Monday, August 15, 2016

ಸುಪ್ರತೀಕ.


ಸುಪ್ರತೀಕ ಗಜ ಯುದ್ಧಕ್ಕೈದಿದ ಪ್ರಸಂಗ ಕುಮಾರವ್ಯಾಸ ಭಾರತದಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.ಆ ಸೊಗಸನ್ನು ಈ ಲೇಖನದಲ್ಲಿ ಗ್ರಹಿಸುವ ಪ್ರಯತ್ನ ಮಾಡಿದ್ದೇನೆ.(ದ್ರೋಣ ಪರ್ವ,ಸಂಧಿ-೩)
ಸುಪ್ರತೀಕ ಎಂಬುದು ಭಗದತ್ತನ ಆನೆಯ ಹೆಸರು. ಭಗದತ್ತ ಪ್ರಾಗ್ಜ್ಯೋತಿಷಪುರದ ರಾಜ. ನರಕಾಸುರನ ಮಗ. ಮಹಾಭಾರತದ ಯುದ್ಧದಲ್ಲಿ ಈತ ಕೌರವನ ಪರವಾಗಿದ್ದ.
ಇವನ ಆನೆ ಹೇಗಿತ್ತು ಎಂಬ ಚಿತ್ರಣದೊಂದಿಗೆ ವಿವರಣೆಯನ್ನು ಶುರುಮಾಡಬಹುದು.
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಲ ಕುಲ
ದಿಗಿಭವೆಂಟೊಂದಾಯ್ತೋ ಕೈಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ|| (ದ್ರೋ.ಪ, ಸಂ೩, ಪ-೯)
ಯುದ್ಧಕ್ಕೆ ತಯಾರಾದ ಆನೆ ಹೇಗೆ ಕಾಣುತ್ತಿತ್ತು?
೧]ಜಗತ್ತಿನ ನಿದ್ರೆ ಅಂದರೆ ಪ್ರಳಯವಾಗಿ ಇನ್ನೂ ಯಾವುದೇ ಸೃಷ್ಟಿ ಆಗಿರದಿದ್ದ ಕಾಲ.ಅಂತಹ ಸಮಯದಲ್ಲಿ ದಂಡುಗಟ್ಟಿದ ಮೋಡಗಳಂತೆ.
೨] ಅಷ್ಟದಿಗ್ಗಜಗಳು ಒಂದಾದಂತೆ
(ಐರಾವತ,ಪುಂಡರೀಕ,ವಾಮನ,ಕುಮುದ,ಅಂಜನ,ಪುಷ್ಪದಂತ,ಸಾರ್ವಭೌಮ,ಸುಪ್ರತೀಕ.)
೩] ಆಕಾಶಕ್ಕೆ ಕೈ ಮತ್ತು ಕಾಲು ಹುಟ್ಟಿದಂತೆ.
ಇಲ್ಲಿ ಕುಮಾರವ್ಯಾಸನ ಹೋಲಿಕೆಯ ಶಕ್ತಿಯನ್ನು ಗಮನಿಸಬೇಕು.ಮೊದಲಿಗೆ ಮೋಡದ ಹೋಲಿಕೆ. ಆದರೆ ಮೋಡಕ್ಕೆ ನಿಖರವಾದ ಆಕಾರವಿಲ್ಲ.ಆದ್ದರಿಂದ ಮೋಡ ಮೂರ್ತವಾದ,ನಿಖರ ಆಕಾರವಿರುವ ಆನೆಯನ್ನು ಸಮೀಕರಿಸಲಾರದು ಎಂಬ ಕಾರಣದಿಂದ ಎಂಟು ಆನೆಗಳೂ ಸೇರಿದಂತೆ ಎಂಬ ಮತ್ತೊಂದು ಹೋಲಿಕೆ ಕೊಡುತ್ತಾನೆ. ಈ ಆನೆಗಳು ಒಗ್ಗೂಡಿದರೆ ಬರುವ ಗಾತ್ರ ಸುಪ್ರತೀಕ ಒಂದರಲ್ಲಿಯೇ ಇತ್ತು. ಆದರೆ ಸುಪ್ರತೀಕದ ಗಾತ್ರಕ್ಕೆ ಆ ಹೋಲಿಕೆಯೂ ಸಾಕಾಗದು ಅನಿಸಿ ಆಕಾಶಕ್ಕೆ ಕೈಕಾಲ್ ಮೂಡಿದೆ ಎಂದು ಹೇಳಿದ್ದಾನೆ. ಗಾತ್ರದಲ್ಲಿ ಆಕಾಶವನ್ನು ಮೀರಿಸುವ ಏನೂ ಇರಲು ಸಾಧ್ಯವಿಲ್ಲ.ಈ ಗಜ ಅಂತಹ ಗಾತ್ರವನ್ನು ಹೊಂದಿದೆ.
***ಜಲಪ್ರಳಯ ಕಾಲದ ಮೋಡಕ್ಕೆ ಹೋಲಿಸುವ ಮೂಲಕ ಈ ಗಜ ಮುಂದೆ ಯುದ್ಧದಲ್ಲಿ ಪ್ರಳಯಕಾಲದಲ್ಲಿ ಆಗುವ ನಾಶಕ್ಕೆ ಸಮನಾದುದನ್ನೂ ಮಾಡುತ್ತದೆ ಎಂಬುದೂ ಸೂಚಿತವಾಗುತ್ತದೆ.***
ಇದು ಆನೆಯ ಭೌತಿಕ ರೂಪದ ಚಿತ್ರಣ.ಇಲ್ಲಿ ಆನೆಯ ದೈಹಿಕ ಗಾತ್ರದ ಚಿತ್ರಣ ಮಾತ್ರ ಆಗಿದೆ.ಆದರೆ ಅದರ ಬಲ ಯಾವ ಪ್ರಮಾಣದ್ದು ಎಂಬುದು ಸೂಚಿತವಾಗಿಲ್ಲ.ಎಂಟು ಆನೆಗಳು ಸೇರಿದಂತೆ ಕಾಣುವುದು ಗಾತ್ರಕ್ಕೆ ಮಾತ್ರ ಹೋಲಿಕೆಯಲ್ಲ,ಬಲಕ್ಕೂ ಹೌದು ಎಂಬುದನ್ನು,ಎರಡನೆಯ ಭಾಗದಲ್ಲಿ, ಈ ಬಲ ಉಂಟುಮಾಡಿದ ಪರಿಣಾಮವನ್ನು ಚಿತ್ರಿಸುವ ಮೂಲಕ ವ್ಯಕ್ತಪಡಿಸಿದ್ದಾನೆ.ಪೂರ್ವ ದಿಕ್ಕಿನ ಕಾಲನ್ನು ನೆಲಕ್ಕಿಟ್ಟಾಗ ಅದರ ಪದಹತಿಗೆ ಭೂಮಿ ಪಶ್ಚಿಮದಿಕ್ಕಿನಲ್ಲಿ ಮೇಲೆದ್ದಿತು.(ತಕ್ಕಡಿಯನ್ನು ಕಲ್ಪಿಸಿಕೊಳ್ಳಬಹುದು).ಪಶ್ಚಿಮದಿಕ್ಕಿನ ಪಾದವನ್ನೂರಿದಾಗ ಪೂರ್ವ ದಿಕ್ಕಿನ ಭೂಮಿ ಮೇಲೆದ್ದಿತು.ಒಂದು ಹೆಜ್ಜೆಯನ್ನು ಸುಮ್ಮನೆ ಇಟ್ಟರೆ, ಈ ಆನೆಯನ್ನೂ ಸೇರಿದಂತೆ ಅಪಾರ ಚರಾಚರಗಳನ್ನು ಹೊತ್ತ ಭೂಮಿಯ ಮೇಲೆ ಈ ಪರಿಣಾಮ ಆಗಬೇಕಿದ್ದರೆ ಆ ಬಲ ಯಾವ ಮಟ್ಟದ್ದಿರಬಹುದು ಎಂದು ನಾವು ಊಹಿಸಬಹುದು.
ಇಂತಹ ಆನೆ ಯುದ್ಧಕ್ಕೆ ಹೊರಟಿತು. ಇದರ ಯುದ್ಧ ತುಂಬಾ ಭೀಕರ ವಾದದ್ದು.ಪಾಂಡವಸೇನೆಯಲ್ಲಿ ಯಾರಿಗೂ ಅದನ್ನು ನಿಯಂತ್ರಿಸಲು ಆಗುವುದಿಲ್ಲ.ಭೀಮ ತನ್ನ ಗದೆ ಹಿಡಿದು ಎದುರಾಗುತ್ತಾನೆ. ಆನೆ ಯುದ್ಧ ಮಾಡುವ ಪರಿಯ ವರ್ಣನೆ ನೋಡಿ.
“ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರ
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ || ದ್ರೋ.ಪ,ಸಂ ೩,ಪ-೧೭||
ಶತ್ರುಬಲವನ್ನು ಅರೆಯಿತು.ಸಾವಿನ ಒಡೆಯನಾದ ಯಮನನ್ನು ಸಾಕಿತು.(ಯಮನನ್ನು ಸಾಕುವುದು ಎಂದರೆ ಆತನಿಗೆ ಕೆಲಸ ನೀಡುವುದು.ಅಂದರೆ ಜನರನ್ನು ಕೊಂದು ಆತನ ಆಲಯಕ್ಕೆ ಕಳಿಸುವುದು.)ಮಹಾಸಂಹಾರದ ಮಂತ್ರವನ್ನು ಬರೆಯಿತು. ಯುದ್ಧಕ್ಕೆ ಬರಲು ಒಪ್ಪದ ವೀರರನ್ನು ಯುದ್ಧಕ್ಕೆ ಬನ್ನಿ ಎಂದು ಕರೆಯಿತು. ಪರಬಲದವರು ಬೆವರಿ ನೆನೆದರು. ಎದುರು ಬಂದ ವೀರರು ದಿಕ್ಕಾಪಾಲಾಗಿ ಓಡಿದರು.ದ್ರುಪದನು ಓಡಿಯೇ ಹೋದ.ಭೀಮ ಪಕ್ಕಕ್ಕೆ ಹಾರಿಕೊಂಡ.ಹಾಗೆ ಮಾಡಲಾಗದೆ ಅದಕ್ಕೆ ಸಿಕ್ಕಿದವರ ದೇಹ ಮತ್ತು ಉಸಿರಿನ ಸಂಬಂಧ ಅಳಿಯಿತು.(“ಹಿಡಿಹಿಡಿಯಲೋಡಿದನು ದ್ರುಪದನು ಸಿಡಿದು ಕೆಲಸಾರಿದನು ಪವನಜನೊಡಲುಸರ ಸಂಬಂಧವಳಿದುದು ಸಿಲುಕಿದನಿಬರಿಗೆ” ಪ-೨೫.)
ಮತ್ತೆ ಭೀಮ ಅದಕ್ಕೆದುರಾಗುತ್ತಾನೆ.ಆನೆಯ ಅಕ್ಕಪಕ್ಕ ,ಹಿಂದೆ ಮುಂದೆ ಸಂಚರಿಸುತ್ತ ಭೀಮ ಅದರ ಜತೆ ಕಾದುತ್ತಾನೆ.ಆಗ ಆನೆಯ ಪ್ರತಿಕ್ರಿಯೆಯ ವರ್ಣನೆ:
“ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡುಹಿಂಗೆ ಲಾಗಿಸುತಿರ್ದುದಾ ದಂತಿ ||ಪ-೩೭||
(ಬಲುಕಣಿ=ಬಲ್ಕಣಿ=ಮಹಾ ಪರಾಕ್ರಮಿ)
ಭೀಮ ಪಕ್ಕಕ್ಕೆ ಬಂದಾಗ ಅವನ ನೆರಳು ಕಂಡು ಅದರ ಅಧಾರದಲ್ಲಿ ಭೀಮ ಎಲ್ಲಿರಬಹುದೆಂದು ಊಹಿಸಿ ಅಪ್ಪಳಿಸುವುದು. ಭೀಮ ಸಿಕ್ಕಬಹುದು ಎಂಬಾಸೆಯಲ್ಲಿ ಸೊಂಡಿಲನ್ನು ತೂಗಾಡಿಸುವುದು.ಹಾಗೆ ಮಾಡಿ ಬಳಲುವುದು. ಮುಖವನ್ನೆತ್ತಿ ಭೀಮನ ಮಾತು ಆಲಿಸುವುದು. ತನಗೆ ಹಾಕಿರುವ ಆಭರಣಗಳನ್ನು ಅಲ್ಲಾಡಿಸದೆ,ಕಿವಿಯನ್ನು ಜೋಲಿಸಿ(ಭೀಮನ ಹಜ್ಜೆಯ ಸದ್ದು ಗ್ರಹಿಸಲು) ಮಹಾಪರಾಕ್ರಮಿಯಾದ ಭೀಮನನ್ನು ಹಿಡಿಯಲು ಯೋಜನೆ ರೂಪಿಸುವುದು.
ರುದ್ರಭೀಕರವಾಗಿ ಯುದ್ಧಪ್ರವೃತ್ತವಾದ ಆನೆಯನ್ನು ಗೆಲ್ಲಲು ಭೀಮನಿಗೂ ಆಗುವುದಿಲ್ಲ. ಪಾಂಡವಸೇನೆ ಪರಾಜಿತಗೊಳ್ಳುತ್ತಿರುವುದನ್ನು ಕಂಡ ಕೃಷ್ಣನು ಅರ್ಜುನನನ್ನು ಭಗದತ್ತನೆದುರು ಕರೆತರುತ್ತಾನೆ.ಭೀಮನ ಯುದ್ಧ ಆನೆಯ ಜೊತೆಯಾದರೆ ಅರ್ಜುನ ಆನೆಯ ಮೇಲೆ ಕುಳಿತಿದ್ದ ಭಗದತ್ತನ ಜೊತೆ ಯುದ್ಧಕ್ಕಿಳಿಯುತ್ತಾನೆ.ಅವರ ನಡುವೆ ಭೀಕರ ಯುದ್ಧ ನಡೆಯುತ್ತದೆ.ಕಡೆಗೆ ಭಗದತ್ತ, “ಕುಡಿ ಕಿರೀಟಿಯ ರಕುತವನು ಹಗೆ ಕೆಡಲಿ ಕೌರವನಾಳಲಿ ಪೊಡವಿಯನು” ಎಂದು ಘೋಷಿಸಿ ವೈಷ್ಣವಾಸ್ತ್ರವನ್ನು ಪ್ರಯೋಗಿಸುತ್ತಾನೆ.
ಆ ಅಸ್ತ್ರ ಹೇಗಿತ್ತು? “ದಿನಪಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ...(ಪ-೫೫), “ಕಾಳೋರಗನ ಕುಡಿನಾಲಗೆ...(ಪ-೫೬),
ಆಗ ಕೃಷ್ಣನು ಆ ಅಸ್ತ್ರ ಮತ್ತು ಅರ್ಜುನನ ನಡುವೆ ನಿಂತು ತನ್ನ ಎದೆಯೊಡ್ಡಿ ಅಸ್ತ್ರವನ್ನು ಸ್ವೀಕರಿಸುತ್ತಾನೆ. ಅಸ್ತ್ರ “ಕೌಸ್ತುಭದ ಮಣಿ ಮರಿಯನಿಳುಹಿದವೊಲು” ಕೃಷ್ಣನ ಕೊರಳಲ್ಲಿ ತೂಗಾಡುತ್ತದೆ.
ಇಲ್ಲಿಗೆ ಸುಖಾಂತ್ಯವಾಗಬೇಕಿತ್ತು.ಆದರೆ  ಘಟನೆಗಳು ವ್ಯಕ್ತಿಗಳನ್ನು ಪ್ರಚೋದಿಸುವ ಸಾಧ್ಯತೆಗಳು ಅನಂತ.
ಅಂತಹ ಒಂದು ವಿಕ್ಷಿಪ್ತವಾದ ಘಟನೆ ನಡೆಯುತ್ತದೆ.
“ಕೌತುಕವನಿದಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ||(ಸಂ ೩,ಪ-೬೨)
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ಣ ನೀನೇ
ಕಾದು ವಾಘೆಯ ತಾ ಎನಲು ಮರು
ಳಾದನೈ ನರನೆನುತ ಮುರಾರಿಯಿಂತೆಂದ ||ಪ-೬೪||
ಮಹಾಸ್ತ್ರ ಕೌಸ್ತುಭಮಣಿಯ ಮರಿಯಂತೆ ಕೃಷ್ಣನ ಕೊರಳಲ್ಲಿ ಶೋಭಿತವಾದ ಕೌತುಕ ಕಂಡರೂ ಅರ್ಜುನನಿಗೆ ಕೃಷ್ಣ ಹಾಗೆ ಯಾಕೆ ಮಾಡಿದ,ಆ ಅಸ್ತ್ರದ ಶಕ್ತಿ ಎಂಥದು ಎಂಬುದು ಅರ್ಥವಾಗಲಿಲ್ಲ.ಆತನಿಗೆ ದುಗುಡವಾಯಿತು.ಆತ ಯೋಚಿಸಿದ್ದು ಕೃಷ್ಣನಿಗೆ ಸಾರಥಿತನದ ಬಗ್ಗೆ ಆಲಸ್ಯವಾಯಿತೇ ಎಂದು. ಸಾರಥಿಯಾಗಿ ಮಾತ್ರ ನಾನು ಭಾಗವಹಿಸುವೆ ಎಂದ ಕೃಷ್ಣ ಹೀಗೆ ಮಾಡುವುದಾದರೆ ಕೌರವನ ಬಳಿ ಅವನೇ ಯುದ್ಧ ಮಾಡಲಿ, ತಾನವನ ಸಾರಥಿಯಾಗುತ್ತೇನೆ ಎಂದು ಅರ್ಜುನ ಧನುವನ್ನು ಬಿಸಾಡುತ್ತಾನೆ.ನಾನಿನ್ನು ಯುದ್ಧ ಮಾಡುವವನಲ್ಲ,ನೀನೇ ಆಯುಧ ಹಿಡಿ,ತನಗೆ ವಾಘೆಯನ್ನು ಕೊಡು ಎಂದು ಅರ್ಜುನ ಹೇಳುತ್ತಾನೆ.
ಅರ್ಜುನನ ಈ ಪ್ರತಿಕ್ರಿಯೆ ಕುತೂಹಲಕಾರಿಯಾದದ್ದು.ಅವನಿಗೆ ಕೃಷ್ಣನ ಈ ವರ್ತನೆ ಹಿಡಿಸಿಲ್ಲ ಎಂಬುದು ಮೊದಲನೆಯದು. ಹಿಡಿಸದಿರುವ ಕಾರಣ ತನ್ನ ಶೌರ್ಯದ ಬಗ್ಗೆ ಕೃಷ್ಣನಿಗೆ ಅನುಮಾನವಿದೆ ಮತ್ತು ಅವನ ಈ ವರ್ತನೆ ತನಗೆ ಅವಮಾನಕಾರಿಯಾದದ್ದು ಎಂಬ ಭಾವನೆ.(...ವೈರಿಯ ಕೈದುವನು ನೀ ಗೆಲಿದೆಯಿನ್ನುರೆ ಕಾದುವವರಾವಲ್ಲ.....)
ಅರ್ಜುನನ ಸ್ವಾಭಿಮಾನ, ಕೃಷ್ಣ ಹೀಗೆ ಮಾಡಲು ಏನೋ ಕಾರಣವಿರಬೇಕು ಎಂಬುದನ್ನು ಊಹಿಸಲಾರದಷ್ಟು ಪ್ರಬಲವಾಗಿ ಅಹಂಕಾರರೂಪಿಯಾಗಿತ್ತು ಎಂಬುದು ಎರಡನೆಯದು.(ಈ ಯುದ್ಧದಲ್ಲಿ ಕೃಷ್ಣ ತಾನೇ ನೇರವಾಗಿ ಅಸ್ತ್ರದೆದುರು ನಿಂತ ಸಂದರ್ಭ ಇದೊಂದೇ.ಬೇರೆ ಎಲ್ಲ ಸನ್ನಿವೇಶಗಳಲ್ಲೂ ತಂತ್ರ ಮಾಡಿ ಸಮಸ್ಯೆಯನ್ನು ಪರಿಹರಿಸಿದ್ದಾನೆಯೇ ಹೊರತು ನೇರವಾಗಿ ಭಾಗಿಯಾಗಿ ಅಲ್ಲ.ಉದಾಹರಣೆಗೆ ಜಯದ್ರಥ ವಧೆ,ದ್ರೋಣವಧೆ,ಸರ್ಪಾಸ್ತ್ರ ಪ್ರಸಂಗ ಇತ್ಯಾದಿಗಳನ್ನು ಗಮನಿಸಬಹುದು.)
ಆಗ ಕೃಷ್ಣ ಆ ಅಸ್ತ್ರದ ಶಕ್ತಿಯನ್ನು ಅವನಿಗೆ ವಿವರಿಸುತ್ತಾನೆ.ತಾನಲ್ಲದೆ ಬೇರೆ ಯಾರಿಗೂ ಆ ಅಸ್ತ್ರವನ್ನು ನಿಷೇಧಿಸಲು ಆಗದು,ಆ ಕಾರಣದಿಂದ ತಾನು ಹಾಗೆ ಮಾಡಿದ್ದು ಎಂಬ ಅವನ ವಿವರಣೆ ಅರ್ಜುನನಿಗೆ ಸಮಾಧಾನ ನೀಡುತ್ತದೆ.
ಈ ಚಿತ್ರಣ ಆನೆಯ ಯುದ್ಧದ ವೈಖರಿಯ ಚಿತ್ರಣ ಮಾತ್ರವಾಗದೆ, ಮನುಷ್ಯನ ಅಭಿಮಾನ ಅವನ ವಿವೇಕವನ್ನು ಕ್ಷಣಿಕ ಕಾಲವಾದರೂ ಕುಂಠಿತಗೊಳಿಸಬಹುದು ಎಂಬುದರ ಸೂಚಕವಾಗಿದೆ.
***
ಈ ಪ್ರಸಂಗದಲ್ಲಿ ಕುಮಾರವ್ಯಾಸನ ಕಾವ್ಯಶಕ್ತಿ ಪ್ರಕಟವಾದ ಕೆಲವು ಸಾಲುಗಳು:
೧] ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ ಸರಳು ಮೆರೆದವು-ಪ ೨೬
೨] ಹಾವಿನ ಕೊಡನು ದೋಷಿಗೆ ಸುಲಭವೇ-- ಪ ೨೮
೩] ಬೆತ್ತ ಬೆಳದದ್ರಿಯವೊಲಿದ್ದುದು ಮತ್ತಗಜ—ಪ ೩೯
೪] ಸದರವೇ ಉರಿಗೆಂಡವೊರಲೆಯ ಬಾಯ್ಗೆ—ಪ ೬೦
೫] ಚಾಪದ ನಾರಿ ಬೆಸಲಾಗಲಿ—ಪ ೭೩
೬] ಅಪರಜಲಧಿಯೊಳುರಿವ ವಡಬನ ದೀಪ್ತ ಶಿಖರದೊಳೆರಗುವಂತೆ ಪತಂಗ ಮಂಡಲವಿಳಿದುದಂಬರವ—ಪ ೮೦














Tuesday, September 15, 2015

ಒಂದು ಪ್ರತಿಮೆ


ಅಡಿಗರು ತಮ್ಮ ಭೂಮಿಗೀತ ಕವನದಲ್ಲಿ ಬಳಸಿರುವ ಒಂದು ಪ್ರತಿಮೆಯ ವಿವರಣೆ ಈ ಲೇಖನದ ಆಶಯ. ಈ ಪ್ರತಿಮೆಯ ಧ್ವನಿಗ್ರಹಿಕೆ ಮಾತ್ರ ನನ್ನ ಉದ್ದೇಶವೇ ಹೊರತು ಇವು ಕವನದಲ್ಲಿ ಹೇಗೆ ಸಂಗತವಾಗಿವೆ ಎಂಬುದಲ್ಲ. ಕವನವನ್ನು ಒಟ್ಟಂದದಲ್ಲಿ ಗ್ರಹಿಸುವಲ್ಲಿ ಆ ಸಾಂಗತ್ಯ ಹೊಳೆಯುತ್ತದೆ. 
************
"ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ, ಸಾಯಿಸಲಿಕಲ್ಲದೇ ಬರಳು ಕುಂತಿ."( ಭೂಮಿಗೀತ-೮೨ನೆಯ ಸಾಲು)
ಅಡಿಗರು ಪೂರ್ವಕೃತಿಗಳ ಘಟನೆಗಳನ್ನು ಪ್ರತಿಮೆಯಾಗಿ ಕೆಲವು ಕಡೆ ಬಳಸಿದ್ದಾರೆ. ಈ ವಿಧಾನ ತುಂಬಾ ವಿವರವಾಗಿ ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ,ಧ್ವನಿಪೂರ್ವಕವಾಗಿ ಹೇಳುತ್ತದೆ. ಅದರೆ ಪ್ರತಿಮೆಯ ಧ್ವನಿಯನ್ನು ಗ್ರಹಿಸಲು ನಮಗೆ ಮುಂಚಿತವಾಗಿಯೇ  ಘಟನೆಯ ವಿವರ ತಿಳಿದಿರಬೇಕಾಗುತ್ತದೆ. ಇದು ಅಂತಹ ಪ್ರತಿಮೆಗಳಲ್ಲಿ ಒಂದು. ಮಹಾಭಾರತದ ಎರಡು ಘಟನೆಗಳನ್ನುಇಲ್ಲಿ ಪ್ರತಿಮೆಯಾಗಿ ಬಳಸಿಕೊಳ್ಳಲಾಗಿದೆ.
೧.ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ
೨.ಸಾಯಿಸಲಿಕಲ್ಲದೇ ಬರಳು ಕುಂತಿ.
ಮಂತ್ರಪರೀಕ್ಷೆಯ ತವಕದಲ್ಲಿ  ಕನ್ಯೆಯಾಗಿರುವ ಕುಂತಿ ಕರ್ಣನಿಗೆ ಜನ್ಮ ನೀಡುತ್ತಾಳೆ. ಅಪವಾದ ಬರುತ್ತದೆ ಎಂಬ ಭಯದಿಂದ ಮಗುವನ್ನು ಗಂಗೆಯಲ್ಲಿ ತೇಲಿಬಿಡುತ್ತಾಳೆ. ಈ ಮಗು,ಕರ್ಣ,ಸೂತನಾದ ಅಧಿರಥನಿಗೆ ಸಿಗುತ್ತದೆ. ಅವನ ಪತ್ನಿ ರಾಧೆ ಈ ಮಗುವನ್ನು ಸಾಕುತ್ತಾಳೆ. ರಾಧೆಯ ಮಗ ರಾಧೇಯ ಆಗಿ ಬೆಳೆಯುತ್ತದೆ.
ಇಲ್ಲಿ ಅಡಿಗರು ಉದ್ದೇಶಪೂರ್ವಕವಾಗಿ ಕುಂತಿ ಮಗುವನ್ನು ತ್ಯಜಿಸಿದ ಸೂಚನೆ ಕೊಡುವುದಿಲ್ಲ. ಬರಿದೇ ಗಂಗೆಯಲಿ ತೇಲಿಬಂದನು ಎಂದು ಹೇಳುತ್ತಾರೆ. ಅಡಿಗರು ಅದನ್ನು ಹೇಳಿದ್ದರೆ ಕರ್ಣ ಈ ಸನ್ನಿವೇಶದ ಮಟ್ಟಿಗೆ ಕೌಂತೇಯ ಆಗುತ್ತಿದ್ದ. ಅವನು ಕುಂತಿಯಮಗನಾದರೂ ಕೌಂತೇಯನಾಗಲಿಲ್ಲ,ರಾಧೇಯನಾದ ಎಂಬುದನ್ನು ಧ್ವನಿಸಲು ಕುಂತಿ ತೇಲಿಬಿಟ್ಟ ಸೂಚನೆ ನೀಡದೆ ಬರಿದೆ ತೇಲಿಬಂದನು ಎಂಬ ಪ್ರಯೋಗ ಬಳಸಿದ್ದಾರೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು. ಒಂದುವೇಳೆ ಕೌಂತೇಯ ಎಂಬ ಪ್ರಯೋಗ ಮಾಡಿದ್ದರೆ ಸಾಯಿಸಲಿಕಲ್ಲದೇ ಬರಳು ಕುಂತಿ ಎಂಬ ಮುಂದಿನ ಹೇಳಿಕೆ ದುರ್ಬಲವಾಗುತ್ತಿತ್ತು. ಸಾಯಿಸಲಿಕಲ್ಲದೇ ಬರಳು ಎಂಬ ಹೇಳಿಕೆಯನ್ನು ಬಲಪಡಿಸುವ ಕಾರ್ಯವನ್ನು ಮೊದಲ ಸಾಲಿನಲ್ಲಿ ಅಡಿಗರು ಮಾಡುತ್ತಾರೆ. ಇದು ಪ್ರಭಾವಶಾಲಿ ಅನಿಸುವುದು ಎರಡನೆಯ ಭಾಗವನ್ನು ನಾವು ಗ್ರಹಿಸಿದಾಗ.
ಕೃಷ್ಣನ ಸೂಚನೆಯಂತೆ ಕುಂತಿ ಕರ್ಣನನ್ನು ಮೊದಲ ಭಾರಿ ಭೇಟಿಯಾಗುವುದು ಅವನಿಂದ ತೊಟ್ಟ ಬಾಣವನ್ನು ಮರಳಿ ತೊಡಬಾರದು ಮತ್ತು ತನ್ನ ಐವರು ಮಕ್ಕಳನ್ನು ಕೊಲ್ಲದೆ ಕಾಯಬೇಕು ಎಂಬೆರಡು ಮಾತು ಪಡೆಯಲು. ಮೊದಲ ಮಾತೇ ಮುಂದೆ ಕರ್ಣನ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಕುಂತಿ ಬರುವುದು ಕರ್ಣನ ಸಾವನ್ನು ಬೇಡಿ ಎಂಬ ಎರಡನೆಯ ಸಾಲಿನ ಅರ್ಥವಿವರ ಸ್ಪಷ್ಟವಾಗುತ್ತದೆ.
ಇವೆರಡೂ ಹೇಳಿಕೆಗಳನ್ನು ಒಟ್ಟಿನಲ್ಲಿ ಗ್ರಹಿಸಿದರೆ ಒಂದಕ್ಕೊಂದು ಸಂಗತವಾಗುವ ಸಂಬಂಧ ಸ್ಪಷ್ಟವಾಗುತ್ತದೆ. ಕರ್ಣ ರಾಧೇಯನಾಗಿದ್ದರಿಂದಲೇ ಕುಂತಿಗೆ ಮಾತು ಕೊಡು ಎಂದು ಕೇಳಲು ಸಾಧ್ಯವಾಯಿತು. ಅವನು ಕೌಂತೇಯನಾಗಿದ್ದರೆ ಅವಳಿಗೆ ಈ ಮಾತನ್ನು ಕೇಳಲು ಆಗುತ್ತಿರಲಿಲ್ಲ. ಇಡೀ ಕವನದ ಅರ್ಥವ್ಯಾಪ್ತಿಯನ್ನು ಆವರಿಸುವ ಎರಡನೆಯ ವಾಕ್ಯದ ಧ್ವನಿಯನ್ನು ಬಲಪಡಿಸವುದೇ ಮೊದಲ ವಾಕ್ಯ.  ರಾಧೇಯ ಎಂಬುದರ ಬಳಕೆಯ ಉದ್ದೇಶ ಎರಡನೆಯ ವಾಕ್ಯದ ತೀವ್ರತೆಯನ್ನು ಹೆಚ್ಚಿಸುವುದು.( ಇವು ಇವಳ ಸಹಜ ಸಂತಾನ ಎಂಬ ಕವನದ ಸಾಲಿನ ಹಿನ್ನೆಲೆಯಲ್ಲಿ ಗಮನಿಸಬಹುದು.)